ಬೆಂಗಳೂರು: ವೈದ್ಯೆ ಕೃತಿಕಾ ಕೊಲೆ ಪ್ರಕರಣದಲ್ಲಿ ಆರೋಪಿ ಮಹೇಂದ್ರ ರೆಡ್ಡಿ ತನ್ನ ಪತ್ನಿಗೆ ಅನಸ್ತೇಷಿಯಾ ಕೊಟ್ಟಿದ್ದು ತಾನೇ ಎಂದು ಒಪ್ಪಿಕೊಂಡಿದ್ದಾನೆ. ಪೊಲೀಸ್ ಕಸ್ಟಡಿಯಲ್ಲಿರುವ ವೈದ್ಯ, ಕೃತಿಕಾ ಪೋಷಕರು ತನಗೆ ಮೋಸ ಮಾಡಿ ಮದುವೆ ಮಾಡಿಸಿದರು ಎಂದು ಆರೋಪಿಸಿದ್ದಾನೆ. ಇದರಿಂದ ರಿವೆಂಜ್ ತೀರಿಸಿಕೊಳ್ಳಲು ಹತ್ಯೆಗೆ ಯೋಜನೆ ರೂಪಿಸಿದ್ದೆ ಎಂದು ಒಪ್ಪಿಕೊಂಡಿದ್ದಾನೆ.ಕೃತಿಕಾ ಮತ್ತು ಮಹೇಂದ್ರ ರೆಡ್ಡಿ ದಂಪತಿಗಳು ಅದ್ದೂರಿ ಮದುವೆಯೊಂದಿಗೆ ಜೀವನ ಆರಂಭಿಸಿದ್ದರು. ಆದರೆ ಮದುವೆಯ ನಂತರ ಮಹೇಂದ್ರಗೆ ಕೃತಿಕಾ ಆರೋಗ್ಯ ಸಮಸ್ಯೆಯ ಬಗ್ಗೆ ಗೊತ್ತಾಯಿತು. ಅವಳು ಏನೇ ತಿಂದರೂ ಅಥವಾ ಕುಡಿದರೂ ವಾಂತಿ ಮಾಡುತ್ತಿದ್ದಳು ಎಂದು ಅವನು ಹೇಳಿಕೊಂಡಿದ್ದಾನೆ. ಪಾರ್ಟಿ ಗಳಲ್ಲಿ ಮತ್ತು ಕಾರ್ಯಕ್ರಮಗಳಲ್ಲಿ ಇದು ಮುಜುಗರಕ್ಕೆ ಕಾರಣವಾಗುತ್ತಿತ್ತು. ಸ್ನೇಹಿತರು ತಮಾಷೆಯಾಗಿ ‘ನಿನಗೆ ರೋಗದ ಹೆಂಡತಿ ಸಿಕ್ಕಿದ್ದಾಳೆ’ ಎಂದು ಹೀಯಾಳಿಸುತ್ತಿದ್ದರಂತೆ. ಇದರಿಂದ ಮಹೇಂದ್ರನಲ್ಲಿ ಪತ್ನಿಯ ಬಗ್ಗೆ ಬೇಸರ ಮತ್ತು ಕೋಪ ಉಂಟಾಯಿತು. ಅವನು ತನ್ನ ಹೇಳಿಕೆಯಲ್ಲಿ, ತಾನು ಒಂದೊಳ್ಳೆ ಜೀವನದ ಕನಸು ಕಂಡಿದ್ದೆ. ಆದರೆ ರೋಗಿಷ್ಟೆಯೊಬ್ಬಳನ್ನು ಮದುವೆ ಮಾಡಿಸಿದರು ಎಂದು ಆರೋಪಿಸಿದ್ದಾನೆ.
ಮಹೇಂದ್ರ ರೆಡ್ಡಿ, ಕೃತಿಕಾ ಪೋಷಕರ ಮೇಲೆ ತೀವ್ರ ಆರೋಪ ಮಾಡಿದ್ದಾನೆ. ಅವರು ಅವಳ ಆರೋಗ್ಯ ಸಮಸ್ಯೆಯನ್ನು ಮುಚ್ಚಿಟ್ಟು ಮದುವೆ ಮಾಡಿಸಿದರು ಎಂದು ಹೇಳಿದ್ದಾನೆ. ಅದ್ದೂರಿ ಖರ್ಚು ಮಾಡಿ ಮದುವೆ ಮಾಡಿಸಿದ್ದರೂ, ಸತ್ಯ ಗೊತ್ತಾಗಬೇಕಿತ್ತು. ಇದು ಸಂಪೂರ್ಣ ವಂಚನೆ ಎಂದು ಅವನು ಹೇಳಿ ಕೊಂಡಿದ್ದಾನೆ. ಇದರಿಂದಾಗಿ ಅವನು ಪತ್ನಿಯಿಂದ ದೂರವಾಗಲು ನಿರ್ಧರಿಸಿದ್ದನಂತೆ. ಮತ್ತೊಬ್ಬ ಯುವತಿಯನ್ನು ಪ್ರೀತಿಸಿ, ಕೃತಿಕಾ ಸಾವನ್ನಪ್ಪಿದರೆ ಆಕೆಯ ಜತೆ ಜೀವನ ನಡೆಸ ಬಹುದು ಎಂಬ ಉದ್ದೇಶದಿಂದ ಹತ್ಯೆಗೆ ಪ್ಲಾನ್ ರೂಪಿಸಿದ್ದೆ ಎಂದು ಒಪ್ಪಿಕೊಂಡಿದ್ದಾನೆ.

