ಬೆಂಗಳೂರು: ನಗರದ ಬಾಗಲಗುಂಟೆ ಬಳಿಯ ಭುವನೇಶ್ವರಿ ನಗರದಲ್ಲಿ ಇಬ್ಬರು ಮಕ್ಕಳಾದ್ದ ಭುವನ್ (1), ಬೃಂದಾ (4), ಕೊಂದು ತಾಯಿ ವಿಜಯಲಕ್ಷ್ಮಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ವಿಜಯಲಕ್ಷ್ಮಿಯ ತಂಗಿ ಮನೆಗೆ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ರಮೇಶ್, ವಿಜಯಲಕ್ಷ್ಮಿ ಮದುವೆಯಾಗಿ ಐದು ವರ್ಷವಾಗಿತ್ತು. ಕೌಟುಂಬಿಕ ಕಲಹದಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.ಪತಿ ರಮೇಶ್ ಮಾಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ಸಾವಿನ ಬಗ್ಗೆ ನಿಖರ ಕಾರಣ ಇನ್ನು ತಿಳಿದು ಬಂದಿಲ್ಲ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಬಾಗಲಗುಂಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ವಿಜಯಲಕ್ಷ್ಮಿ ಆತ್ಮಹತ್ಯೆಗೆ ಪತಿಯೇ ಕಾರಣ ಎಂದು ಸಂಬಂಧಿಕರು ದೂರಿದ್ದಾರೆ. ರಮೇಶ್ ಮತ್ತೊಂದು ಮದುವೆಯಾಗಿದ್ದು ಡಿವೋರ್ಸ್ ಕೊಡುವಂತೆ ಪತ್ನಿಗೆ ಬೆದರಿಕೆ ಹಾಕುತ್ತಿದ್ದರು. ಹೀಗಾಗಿ ಪದೇ ಪದೇ ಕುಟುಂಬದಲ್ಲಿ ಜಗಳ ನಡೆಯುತ್ತಿತ್ತು. ಈ ವಿಚಾರ ಕುಟುಂಬಸ್ಥರ ಬಳಿ ವಿಜಯಲಕ್ಷ್ಮಿ ಹೇಳಿಕೊಂಡಿದ್ದಳು. ಈತನ ಹಿಂಸೆಯಿಂದ ಬೇಸತ್ತು ವಿಜಯಲಕ್ಷ್ಮಿ ತನ್ನ ಮಕ್ಕಳನ್ನ ಕೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಆರೋಪಿಸಿದ್ದಾರೆ

