ಕುಂದಾಪುರ : ನಗರದೊಂದಿಗೆ ಗ್ರಾಮೀಣ ಪ್ರದೇಶದ ಬಡ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕೆಂಬ ಮಹತ್ವಾಕಾಂಕ್ಷೆಯಿAದ ಹುಟ್ಟಿಕೊಂಡ ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ 2025-26ನೇ ಸಾಲಿನ ಪ್ರಥಮ ವರ್ಷದ ಸಿ.ಎ., ಸಿ.ಎಸ್., ಸಿ.ಎಮ್.ಎ. ವಿದ್ಯಾರ್ಥಿಗಳಿಗೆ ಪೂರ್ವ ಪರಿಚಯ ಕಾರ್ಯಕ್ರಮ, ಸಾಧಕರಿಗೆ ಸನ್ಮಾನ ಹಾಗೂ ಮುಂದಿನ ದಿನಗಳಲ್ಲಿ ನಡೆಯುವ ತರಬೇತಿಯ ಉದ್ಘಾಟನಾ ಸಮಾರಂಭ ನೆರವೇರಿತು.
ಉಡುಪಿಯ ವಿ-ರೀಚ್ ಸಂಸ್ಥೆಯ ಸ್ಥಾಪಕರು ಹಾಗೂ ತರಬೇತುದಾರರಾದ ಸಿ.ಎಸ್. ಸಂತೋಷ್ ಪ್ರಭು ಅವರು ಉದ್ಘಾಟಿಸಿ, ವರ್ತಮಾನದಲ್ಲಿ ಸಿ.ಎ., ಸಿ.ಎಸ್., ಸಿ.ಎಮ್.ಎ. ಪ್ರೊಫೆಷನಲ್ ಕೋರ್ಸ್ಗಳ ಮಹತ್ವ ಹಾಗೂ ವಿದ್ಯಾರ್ಥಿಗಳ ಓದಿನ ಕ್ರಮದ ಕುರಿತು ಮಾತನಾಡಿದರು. ಇದೇ ಸಂದರ್ಭ ಈ ಹಿಂದೆ ನಡೆದ ಸಿ.ಎ., ಸಿ.ಎಸ್., ಸಿ.ಎಮ್.ಎ. ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿಯವರು ಮಾತನಾಡಿ, ವಿದ್ಯಾರ್ಥಿಗಳಲ್ಲಿ ಪ್ರೊಫೆಷನಲ್ ಕೋರ್ಸ್ ಅಭ್ಯಾಸದ ಪೂರ್ವದಲ್ಲಿ ಇರಬೇಕಾದ ಛಲ ಹಾಗೂ ಅಭ್ಯಾಸ ಸಮಯದಲ್ಲಿರಬೇಕಾದ ನಿಷ್ಠೆ, ಪಾಲಿಸಬೇಕಾದ ವೈಯಕ್ತಿಕ ವೇಳಾಪಟ್ಟಿ, ಬೆಳೆಸಿಕೊಳ್ಳಬೇಕಾದ ಹವ್ಯಾಸ, ಆಹಾರ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಉಪ-ಪ್ರಾಂಶುಪಾಲರಾದ ಡಾ| ಚೇತನ್ ಶೆಟ್ಟಿ ಕೋವಾಡಿ ಅವರು ಸಂಸ್ಥೆಯಲ್ಲಿ ಸಿ.ಎ., ಸಿ.ಎಸ್., ಸಿ.ಎಮ್.ಎ. ವಿದ್ಯಾರ್ಥಿಗಳಿಗೆ ಇರಬೇಕಾದ ಶಿಸ್ತು ಮತ್ತು ಇದನ್ನು ನಿಭಾಯಿಸಲು ಬೇಕಾದ ಸಂಯಮಗಳ ಕುರಿತು ಪ್ರಾಸ್ತಾವಿಕ ನುಡಿಗಳನ್ನಾಡಿದರು.
ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ವೀಣಾ ವಿ. ಭಟ್ ಸ್ವಾಗತಿಸಿ, ಕಾರ್ಯಕ್ರಮದ ಸಂಯೋಜಕರಾದ ಸುಹಾಸ್ ಜಟ್ಟಿಮನೆ ವಂದಿಸಿ, ಅಂತಿಮ ವರ್ಷದ ವಿದ್ಯಾರ್ಥಿನಿ ಸಿಂಚನ ನಿರೂಪಿಸಿದರು. ಕಾರ್ಯಕ್ರಮದಲ್ಲಿ ವಾಣಿಜ್ಯ ವಿಭಾಗದ ಎಲ್ಲಾ ಪ್ರಾಧ್ಯಾಪಕರು ಉಪಸ್ಥಿತರಿದ್ದರು.

