ಉಡುಪಿ : ಕೇಂದ್ರ ಸರಕಾರ ಯೋಜನೆಯಾದ ಜನೌಷಧ ಕೇಂದ್ರವನ್ನು ಆಸ್ಪತ್ರೆಯ ಆವರಣದೊಳಗಿದ್ದರೆ ಮುಚ್ಚಬೇಕೆಂಬ ಆದೇಶವನ್ನು ರಾಜ್ಯ ಸರಕಾರ ತಕ್ಷಣ ವಾಪಸು ಪಡೆಯಬೇಕು. ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಮೇಲೆ ಆಡಳಿತಾತ್ಮಕ ಕಿರುಕುಳ ಮುಂದುವರಿಸಿರುವುದಕ್ಕೆ ಇದೇ ಸಾಕ್ಷಿ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಕಿಡಿಕಾರಿದ್ದಾರೆ.
ಗುರುವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕೇಂದ್ರದಲ್ಲಿ ಜನೌಷಧ ಕಡಿಮೆ ದರದಲ್ಲಿ ರೋಗಿಗಳಿಗೆ ಔಷಧ ಸಿಗುತ್ತಿದ್ದು, ಜನ ವಾರ್ಷಿಕ ರೂ. 250 ಕೋಟಿ ವ್ಯವಹಾರ ಮಾಡುತ್ತಿದ್ದಾರೆ. ದೇಶದಲ್ಲಿ 2 ಸಾವಿರ ಕೋಟಿ ವ್ಯವಹಾರ ಜನೌಷಧ ಕೇಂದ್ರದಲ್ಲಿ ನಡೆಯುತ್ತಿದೆ. ಶುಗರ್ನ ರೂ. 95 ಮಾತ್ರೆ, ಇಲ್ಲಿ ರೂಪಾಯಿಗೆ 5 ಸಿಗುತ್ತದೆ. ಕ್ಯಾಲ್ಸಿಯಂ 10 ಮಾತ್ರೆಗೆ ರೂ. 7. ಖಾಸಗಿ ಮೆಡಿಕಲ್ನಲ್ಲಿ ರೂ. 95 ಇದೆ ಎಂದರು.
ನೀವು ಉಚಿತವಾಗಿ ಕೊಟ್ಟರೆ ಜನೌಷಧ ಕೇಂದ್ರ ತನ್ನಷ್ಟಕ್ಕೆ ಮುಚ್ಚಲಿ, ನೀವಾಗಿ ಯಾಕೆ ಮುಚ್ಚುತ್ತೀರಿ..? ಬಡ ರೋಗಿಗಳಿಗೆ ಬಹುದೊಡ್ಡ ಗಂಡಾಂತರ ಇದಾಗಿದ್ದು, ಕೇಂದ್ರದ ಯೋಜನೆಯನ್ನು ವಿಫಲ ಗೊಳಿಸುವ ವ್ಯವಸ್ಥಿತ ಷಡ್ಯಂತ್ರವಾಗಿದೆ. ಸಿಎಂ ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ಈ ವಿಚಾರದಲ್ಲಿ ಬಡ ರೋಗಿಗಳಿಗೆ ಕಿರುಕುಳ ಕೊಟ್ಟು ರಾಜಕೀಯ ಮಾಡಬಾರದು ಎಂದು ಸಲಹೆ ನೀಡಿದರು.

