ಕೋಟ : ಸಾಲಿಗ್ರಾಮದ ಶ್ರೀ ಗುರು ನರಸಿಂಹ ದೇವಸ್ಥಾನದ ಪಾರಂಪರಿಕ ಮನೆಯಕ್ಕಿ ಸಮಾರಾಧನೆಯ ದಿನದ ಅಂಗವಾಗಿ ನಡೆದ ಸರಳ ಸಮಾರಂಭದಲ್ಲಿ ಕೋಡಿ ಗ್ರಾಮ ಮೊಕ್ತೇಸರ ದಿ.ಪಠೇಲ್ ನರಸಿಂಹ ಕಾರಂತರ ಸ್ಮರಣಾರ್ಥ ಜೀವಮಾನ ಸಾಧನಾ ಪ್ರಶಸ್ತಿಯನ್ನು ಮಣೂರು-ಪಡುಕರೆ ಗ್ರಾಮ ಮೊಕ್ತೇಸರ ಕೃಷ್ಣ ಹಂದೆಯವರಿಗೆ ಪ್ರದಾನ ಮಾಡಲಾಯಿತು.
ಕೂಟ ಮಹಾ ಜಗತ್ತಿನ ಕೇಂದ್ರ ಸಂಸ್ಥೆಯ ಉಪಾಧ್ಯಕ್ಷ ಸಿ.ಎ. ಬಿ.ಚಂದ್ರಶೇಖರ ಐತಾಳ ಶುಭಾಶಂಸನೆಗೈದರು.
ಗ್ರಾಮ ಮೊಕ್ತೇಸರ ವೃಂದದ ಪ್ರತಿನಿಧಿ ಕೋಡಿ ನಾಗೇಂದ್ರ ನಾವಡ ಮತ್ತು ಜಗತ್ತಿನ ಪ್ರಧಾನ ಕಾರ್ಯದರ್ಶಿ ಸುರೇಶ ತುಂಗ ಸಂದರ್ಭೋಚಿತವಾಗಿ ಮಾತನಾಡಿದರು.
ದೇವಾಲಯದ ಅಧ್ಯಕ್ಷ ಡಾ.ಕೆ.ಎಸ್.ಕಾರಂತರು ಅಧ್ಯಕ್ಷತೆಯನ್ನು ವಹಿಸಿ ತಂದೆ ದಿ.ನರಸಿಂಹ ಕಾರಂತರ ವ್ಯಕ್ತಿ ಪರಿಚಯವನ್ನು ಪ್ರಸ್ತುತ ಪಡಿಸಿದರು. ಗ್ರಾಮ ಮೊಕ್ತೇಸರ ಗಿಳಿಯಾರು ಮಹಾಬಲ ಹೇರ್ಳೆ ಸನ್ಮಾನ ಪತ್ರವನ್ನು ವಾಚಿಸಿದರು.
ಇದೇ ಸಂದರ್ಭದಲ್ಲಿ ಮಹಾ ಮೂಡುಗಣಪತಿ ಮತ್ತು ಮನೆಯಕ್ಕಿ ಸಮಾರಾಧನೆ ಯ ನಿಧಿಯಲ್ಲಿ ಸಂಚಿತ ಹಣದಿಂದ ರೂ.೫ ಲಕ್ಷಗಳನ್ನು ದೇವಳದ ಶ್ರೀ ಗುರು ಧಾಮ ಕಾಮಗಾರಿಗೆ ಅಧ್ಯಕ್ಷ ಡಾ.ಕೆ.ಎಸ್.ಕಾರಂತರಿಗೆ ನಾಗೇಂದ್ರ ನಾವಡರ ನೇತೃತ್ವದಲ್ಲಿ ಗ್ರಾಮ ಮೊಕ್ತೇಸರರು ಸಾಮೂಹಿಕವಾಗಿ ಹಸ್ತಾಂತರಿಸಿದರು. ನಿಗಮಾಗಮ ವೇದ ಪಾಠಶಾಲೆಯ ವೇದ ಘೋಷದಿಂದ ಆರಂಭವಾದ ಸಮಾರಂಭವು ಕಾರ್ಕಡ ಗ್ರಾಮದ ಪಡು ಹೋಳಿಯ ಮೊಕ್ತೇಸರ ವಿಶ್ವನಾಥ ಹೊಳ್ಳ ಧನ್ಯವಾದ ಸಮರ್ಪಣೆಯೊಂದಿಗೆ ಮುಕ್ತಾಯಗೊಂಡಿತು

