ಕೋಟ : ಸಾಹಿತ್ಯವೇ ಬದುಕನ್ನು ಶ್ರೀಮಂತಗೊಳಿಸುತ್ತದೆ. ಹೆಚ್ಚು ಹೆಚ್ಚು ಓದಬೇಕು. ಅದು ನಮ್ಮ ಮೇಲೆ ಪ್ರಭಾವ ಬೀರುತ್ತದೆ.ಈ ನಿಟ್ಟಿನಲ್ಲಿ ಓದುವವರ ಸಂಖ್ಯೆ ಹೆಚ್ಚಬೇಕು. ಎಂದು ಉಡುಪಿ ಜಿಲ್ಲಾ ಕಸಾಪದ ಪೂರ್ವಾಧ್ಯಕ್ಷ ಎ.ಎಸ್.ಎನ್ ಹೆಬ್ಬಾರ್ ಅಭಿಪ್ರಾಯಪಟ್ಟರು.
ಭಾನುವಾರ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲಾ ಘಟಕ ಹಾಗೂ ಮಿತ್ರ ಮಂಡಳಿ ಕೋಟ ಇವರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೋಟದ ಡಾ. ಕಾರಂತ ಸಭಾಭವನದಲ್ಲಿ ಆಯೋಜಿಸಲಾದ ಏಳು ಕೃತಿಗಳ ಬಿಡುಗಡೆ ಮಾಡಿ ಸಾಹಿತ್ಯಾಸಕ್ತರ ಸಂಖ್ಯೆ ಹೆಚ್ಚಿದಂತೆ ಸಾಹಿತ್ಯಿಕ ಕ್ಷೇತ್ರದಲ್ಲಿ ಪೂರಕ ವಾತಾವರಣ ಸೃಷ್ಠಿಸುವುದಲ್ಲದೆ ಉತ್ತಮ ಪುಸ್ತಕಗಳು ಪ್ರಕಟಗೊಳ್ಳಲು ಸಾಧ್ಯವಾಗುತ್ತದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಗೀತಾನಂದ ಫೌಂಡೇಶನ್ ಮಣೂರು ಇದರ ಪ್ರವರ್ತಕ ಆನಂದ.ಸಿ.ಕುಂದರ್ ಅವರು ಮಾತನಾಡಿ ಕಾರಂತರ ಊರಿನಲ್ಲಿ ಅಮೂಲ್ಯವಾದ ಏಳು ಕೃತಿಗಳು ಬಿಡುಗಡೆಯಾಗಿವೆ.ಈ ಭಾಗದ ಸಮಗ್ರ ಚಿತ್ರಣ ಈ ಕೃತಿಗಳ ಮೂಲಕನಮಗೆ ಸಿಗುತ್ತಿವೆ. ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲಾ ಘಟಕ ಪುಸ್ತಕ ಬಿಡುಗಡೆಗೊಳಿಸಿ ಲೇಖಕರಿಗೆ ಉತ್ತೇಜನ ನೀಡುತ್ತಿರುವುದು ಶ್ಲಾಘನೀಯವೆಂದರು.
ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗರ ನೀಲೇಂದ್ರ ವಾಣಿ ಹಾಗೂ ಕೋಟ ಹದಿನಾಲ್ಕು ಗ್ರಾಮಗಳು, ಶಿಕ್ಷಕ ನರೇಂದ್ರ ಕೋಟ ಅವರ ಸಮಗ್ರ ಬರೆಹಗಳು ಭಾಗ-೧, ಹಿರಿಯ ಸಾಹಿತಿ ಪ್ರೊ.ಉಪೇಂದ್ರ ಸೋಮಯಾಜಿ ಅವರ ಮೆಚ್ಚಿ ಬರೆವ ಪುಳಕ,ಲೇಖಕಿ ಶ್ರೀಮತಿ ಸೃಜನಾ ಸೂರ್ಯ ಅವರ ದುಂಡು ಮಲ್ಲಿಗೆ ಮುಖದವಳು ಕಥಾ ಸಂಕಲನ, ಲೇಖಕಿ ಸುವ್ರತಾ ಅಡಿಗರ ಮಕ್ಕಳ ಕಾದಂಬರಿ ಬಿಲ್ಲಿ ಮತ್ತು ಗೆಳೆಯರು ಹಾಗೂ ಕನಸುಗಳಿಗೆ ಅರ್ಥಹುಡುಕುತ್ತಾ(ಕಥಾ ಸಂಕಲನ) ಲೋಕಾರ್ಪಣೆ ಗೊಂಡವು.
ಕೃತಿಗಳ ಕುರಿತು ಮುಂಜುನಾಥ ಉಪಾಧ್ಯ ಪಾರಂಪಳ್ಳಿ,ಕಾರ್ಕಳ ಕಸಾಪ ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ ಶೆಟ್ಟಿ, ಉಡುಪಿ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ಉಪನ್ಯಾಸಕರಾದ ಜಿ ಸಂಜೀವ, ಲೇಖಕಿ ಶ್ರೀಮತಿ ಪೂರ್ಣಿಮಾ ಕಮಲಶಿಲೆ ಮಾತನಾಡಿದರು.
ಲೇಖಕರ ಪರವಾಗಿ ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಪೊ.ಉಪೇಂದ್ರ ಸೋಮಯಾಜಿ ಅವರ ಶಿಷ್ಯ ನರೇಂದ್ರ ಕುಮಾರ ಕೋಟ ಹಾಗೂ ಅವರ ಶಿಷ್ಯೆಯಂದಿರಾದ ಸೃಜನಾ ಸೂರ್ಯ ಹಾಗೂ ಸುವ್ರತಾ ಅಡಿಗರ ಪುಸ್ತಕ ಬಿಡುಗಡೆಯ ಮೂಲಕ ಕಾರಂತರ ನೆಲದಲ್ಲಿ ಮೂರು ತಲೆಮಾರಿನ ಬರೆಹಗಾರ ಪುಸ್ತಕಗಳು ಒಟ್ಟಿಗೆ ಒಂದೇ ವೇದಿಕೆಯಲ್ಲಿ ಬಿಡುಗಡೆಯಾಗಿ ಗಮನ ಸೆಳೆಯಿತು. ಸಾಹಿತಿ ನರೇಂದ್ರ ಕುಮಾರ ಕೋಟ, ಪ್ರೊ.ಉಪೇಂದ್ರ ಸೋಮಯಾಜಿ, ನರಸಿಂಹಮೂರ್ತಿ ರಾವ್ ಮಣಿಪಾಲ,ಶ್ರೀನಿವಾಸ ಉಪಾಧ್ಯ, ಪೂರ್ಣಿಮಾ ಸುರೇಶ್,ಮುಖ್ಯ ಶಿಕ್ಷಕಿ ಪುಷ್ಪಾವತಿ, ಕೋ ಚಂದ್ರಶೇಖರ ನಾವಡ, ಆನಂದ ಸಾಲಿಗ್ರಾಮ,ದಿನಕರ ಆರ್ ಶೆಟ್ಟಿ ಉಪಸ್ಥಿತರಿದ್ದರು.
ಬ್ರಹಾವರ ಕಸಾಪ ಅಧ್ಯಕ್ಷ ರಾಮಚಂದ್ರ ಐತಾಳ ಸ್ವಾಗತಿಸಿದರು. ಮಹಾಲಕ್ಷ್ಮೀ ಸೋಮಯಾಜಿ ಕಾರ್ಯಕ್ರಮ ನಿರೂಪಿಸಿದರು, ಲೇಖಕಿ ಸುವ್ರತಾ ಅಡಿಗ ವಂದಿಸಿದರು

