ಕುಂದಾಪುರ : ವಿಶಾಲವಾದ ಎತ್ತರದ ಆವರಣದಲ್ಲಿ ಗಂಗಾವಳಿ ನದಿಗೆ ಮುಖ ಮಾಡಿಕೊಂಡಿರುವ ಚಿಕ್ಕಮ್ಮ ದೇವಿ ದೇವಸ್ಥಾನದ ಸಾಂಪ್ರದಾಯಿಕತೆಯ ಮೆರುಗನ್ನು ನೋಡುವುದೇ ಕಣ್ಣಿಗೆ ಒಂದು ಹಬ್ಬ. ನವೀಕರಣದ ಸಂದರ್ಭದಲ್ಲಿ ಆಧುನಿಕತೆ ಮತ್ತು ಸಾಂಪ್ರದಾಯಿಕತೆಯನ್ನು ಮೈಗೂಡಿಸಿಕೊಂಡು ಹೊಚ್ಚ ಹೊಸದಾಗಿ ಅಲಂಕರಿಸಲ್ಪಡುತ್ತಿರುವ ಚಿಕ್ಕಮ್ಮ ದೇವಸ್ಥಾನವು ಶತಮಾನಗಳಿಂದಲೂ ಎಲ್ಲಾ ವರ್ಗದ ಸಮಾಜ ಬಾಂಧವರ ನಂಬಿಕೆ, ನಡವಳಿಕೆ, ಶ್ರದ್ಧೆಯ ಶಕ್ತಿ ಕೇಂದ್ರವಾಗಿ ಖ್ಯಾತಿಯನ್ನು ಪಡೆದುಕೊಂಡು ಬಂದಿದೆ.
ಚಿಕ್ಕಮ್ಮ ದೇವಿ ದೇವಸ್ಥಾನದಲ್ಲಿ ಕಂಡು ಬರುವುದು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ವಿಶಿಷ್ಟವಾಗಿ ಕಂಡು ಬರುವ ಕಾಷ್ಠ ವಿಗ್ರಹಗಳು, ಚಿಕ್ಕು ಅಮ್ಮ ಎಂದೇ ಜನಜನಿತವಾಗಿ ಕ್ರಮೇಣ ಜನರ ಆಡುಭಾಷೆಯಲ್ಲಿ ಚಿಕ್ಕಮ್ಮ ದೇವಿ ಎಂದು ಪರಿವರ್ತಿತವಾಗಿರುವ ಚಿಕ್ಕಮ್ಮ ದೇವಿ ದೇವಸ್ಥಾನವು ಶಕ್ತಿ ಸಾನಿಧ್ಯವನ್ನು ಹೊಂದಿದೆ.
ಸುಮಾರು ಆರು ಅಡಿ ಎತ್ತರದ ಚಿಕ್ಕಮ್ಮ ದೇವಿಯ ಆಕರ್ಷಕ ಮರದ ವಿಗ್ರಹವು ಭಕ್ತರಲ್ಲಿ, ಭಾವುಕರಲ್ಲಿ, ಆಸ್ತಿಕರಲ್ಲಿ ಭಯ – ಭಕ್ತಿಯನ್ನು ಹುಟ್ಟಿಸುತ್ತದೆ. ಚಿಕ್ಕಮ್ಮ ದೇವಿಯ ವಿಗ್ರಹವು ಈ ದೇವಸ್ಥಾನದ ಪ್ರಧಾನ ವಿಗ್ರಹವಾಗಿರುವುದರಿಂದ ಸಂಪ್ರದಾಯದಂತೆ ಅದಕ್ಕೆ ಅಗ್ರ ಪೂಜೆ ಸಲ್ಲುತ್ತದೆ. ಚಿಕ್ಕಮ್ಮ ದೇವಿ ದೇವಸ್ಥಾನದ ಗರ್ಭಗುಡಿಯೊಳಗೆ ಚಿಕ್ಕಮ್ಮನ ವಿಗ್ರಹವಲ್ಲದೇ ಪರಿವಾರ ದೈವಗಳ ಸುಂದರ ಕಾಷ್ಠ ವಿಗ್ರಹಗಳಿವೆ. ಅವು ಗೊರಮ್ಮ, ದೊಟ್ಟೆಕಾಲು ಚಿಕ್ಕು, ಮರ್ಲ ಚಿಕ್ಕು, ಮಾಸ್ತಿಯಮ್ಮ, ನಂದಿ, ಗೆಂಡದ ಹಾೈಗುಳಿ, ಬೊಬ್ಬರ್ಯ, ಮಲಸಾರಿ ಚಿಕ್ಕಮ್ಮ ಗರ್ಭಗುಡಿಯ ಹೆಬ್ಬಾಗಿಲು ಅತ್ಯಂತ ಆಕರ್ಷಕವಾಗಿದೆ. ಇದರ ಕುಸುರಿ ಕೆತ್ತನೆ ನೋಡಲು ಬಹಳ ಸುಂದರವಾಗಿದೆ.
ದಿನಾಂಕ 27 ರಂದುಶನಿವಾರ ಚಂಡಿಕಾ ಹೋಮ, ಗೆಂಡಮಹೋತ್ಸವ ಹಾಗೂ ಅನ್ನಸಂತರ್ಪಣೆ ಮತ್ತು 1 ಕೆ ಜಿ ರಜತಮಾಲೆ ಸಮರ್ಪಣೆ ನಡೆಯಿತು 28ನೇ ತಾರೀಕು ಬೆಳಿಗ್ಗೆ 5 ರಿಂದ ಡಕ್ಕೆ ಬಲಿ, 12.30ಕ್ಕೆ ಮಹಾಪೂಜೆ ಹಾಗೂ ಪ್ರಸಾದ ವಿತರಣೆ ಮತ್ತು ಸಾಂಸ್ಕ್ರತಿಕ ಕಾರ್ಯಕ್ರಮಗಳು ನಡೆಯಲಿದೆ
ಸಾಂಸ್ಕ್ರತಿಕ ಕಾರ್ಯಕ್ರಮದ ಅಂಗವಾಗಿ ಸಂಗಮ್ ಶಾಲಾ ಮೈದಾನದಲ್ಲಿ ಶಿವದೂತ ಗುಳಿಗ ಎಂಬ ವಿಭಿನ್ನ ಶೈಲಿಯ ನಾಟಕ ನಡೆಯಲಿದೆ ಎಲ್ಲಾ ಧಾರ್ಮಿಕ ಹಾಗೂ ಸಾಂಸ್ಕ್ರತಿಕ ಕಾರ್ಯಕ್ರಮಗಳಿಗೆ ಭಕ್ತರು ಆಗಮಿಸಿ ಶ್ರೀ ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ಆಡಳಿತ ಮಂಡಳಿಯ ಅಧ್ಯಕ್ಷರಾದ ನಾಗೇಶ್ ಎಂ. ಪುತ್ರನ್ ಅವರು ವಿನಂತಿಸಿಕೊಂಡಿದ್ದಾರೆ.

