ಕೋಟ : ಸಾಲಿಗ್ರಾಮದ ಗುರುನರಸಿಂಹ ದೇವಸ್ಥಾನದ ಆವರಣದ ಕೂಟ ಬಂಧು ಭವನದಲ್ಲಿ ಬರಹಗಾರ್ತಿ ವಾಣಿಶ್ರೀ ಅಶೋಕ್ ಐತಾಳ ಇವರ ನಾಲ್ಕು ಕಥಾಸಂಕಲನಗಳ ಅನಾವರಣ ಕಾರ್ಯಕ್ರಮ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಉಪೇಂದ್ರ ಸೋಮಯಾಜಿ ಮಾತನಾಡಿ ಸುತ್ತಲಿನ ಸಂಸ್ಕ್ರತಿಯನ್ನು ಪ್ರತಿಬಿಂಬಿಸುವ ಹಾಗೂ ಓದುಗನ ಮನಸ್ಸನ್ನು ಅರಳಿಸುವ ಸಾಹಿತ್ಯ ರಚನೆಯ ಪ್ರಸ್ತುತ ದಿನಗಳಲ್ಲಿಅಗತ್ಯತೆ ಇದೆ ಈ ದಿಸೆಯಲ್ಲಿ ವಾಣಿಶ್ರೀ ಇವರ ಸಾಹಿತಿಕ ಬದುಕು ಯಶಸ್ಸು ಕಾಣುವಂತ್ತಾಗಲಿ ಎಂದು ಹಾರೈಸಿದರು.
ಈ ಕಾರ್ಯಕ್ರಮದಲ್ಲಿ ನಿನಗಾಗಿ ಹೇಳುವೆ ಕಥೆ ನೂರನು ಎಂಬ ಕಥಾಸಂಕಲನವನ್ನು ಹೊನ್ನಾವರದ ಸಹ ಶಿಕ್ಷಕ ಗಣೇಶ ಹೆಗಡೆ, ಗೆಜ್ಜೆ ಕಥಾಸಂಕಲನವನ್ನು ಕುಮಾರಿ ಸುವೃತ ಅಡಿಗ, ಹೆಜ್ಜೆ ಕಥಾಸಂಕಲನವನ್ನು ಸುಮನ ಹೇರಳೆ ಹಾಗೂ ಹನಿ ಇಬ್ಬನಿ ಎಂಬ ಕಥಾ ಸಂಕಲನವನ್ನು, ಮಂಜುನಾಥ ಮರವಂತೆ ಪರಿಚಯಿಸಿದರು.
ಪುಸ್ತಕ ಅನಾವರಣವನ್ನು ಡಾ | ಟಿ ಎಂ ಎ ಪೈ ಮಹಾ ವಿದ್ಯಾಲಯದ ಸಮನ್ವಯಧಿಕಾರಿಗಳಾದ ಡಾ | ಮಹಾಬಲೇಶ್ವರ ರಾವ್, ಡಯಟ್ ಪ್ರಾಂಶುಪಾಲರಾದ ಡಾ | ಅಶೋಕ ಕಾಮತ್, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ ಹಾಗೂ ನಿವೃತ್ತ ಶಿಕ್ಷಣಾಧಿಕಾರಿಗಳಾದ ಸೀತಾರಾಮ ಶೆಟ್ಟಿಯವರು ಪುಸ್ತಕಗಳನ್ನು ಬಿಡುಗಡೆಗೊಳಿಸಿ ಅಭಿನಂಧಿಸಿದರು.
ನಿವೃತ್ತ ಉಪನ್ಯಾಸಕರಾದ ಪಾರ್ವತಿ ಜಿ ಐತಾಳ್ ಹಾಗೂ ರಾಷ್ಟç ಪ್ರಶಸ್ತಿ ಪುರಸ್ಕೃತ ಸಹಶಿಕ್ಷಕ ಸುರೇಶ ಮರಕಾಲ ಇವರು ಕಥೆಗಾರ್ತಿಗೆ ಶುಭ ಹಾರೈಸಿದರು.
ಕುಂದಾಪುರದ ಶಿಕ್ಷಣಾಧಿಕಾರಿಗಳಾದ ಶೋಭಾ ಶೆಟ್ಟಿ ,ಕೋಟ ಸಿ.ಎ ಬ್ಯಾಂಕ್ ಪ್ರಭಂಧಕ ಅಶೋಕ ಐತಾಳ ಉಪಸ್ಥಿತರಿದ್ದರು. ಇದೇ ವೇಳೆ ಪುಸ್ತಕಗಳ ರಚನೆಗೆ ಸಹಕರಿಸಿದವರಿಗೆ ಸ್ಮರಣೆಗೆ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಗುರುಗಳಿಗೆ ಹಾಗೂ ಪೋಷಕರಿಗೆ ಗೌರವ ಸಮರ್ಪಣೆಯನ್ನು ನಡೆಸಲಾಯಿತು.
ಸಹಶಿಕ್ಷಕರಾದ ಅರ್ಪಣಾ ಬಾಯಿ ಸರಕಾರಿ ಪ್ರೌಢಶಾಲೆ ಬೀಜಾಡಿ ಇವರು ಕಾರ್ಯಕ್ರಮವನ್ನು ನಿರ್ವಹಿಸಿದರು. ಕಥೆಗಾರ್ತಿ ವಾಣಿಶ್ರೀ ಅಶೋಕ ಐತಾಳ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕುಮಾರ ಅವನೀಶ ಐತಾಳ್ ಸ್ವಾಗತಿಸಿದರು. ರಾಜಶ್ರೀ ತಂತ್ರಿ ವಂದನಾರ್ಪಣೆಗೈದರು.

