ಕುಂದಾಪುರ : ತ್ರಾಸಿ ಮರವಂತೆ ಕಡಲಿನಲ್ಲಿ ಮುನ್ನೆಚ್ಚರಿಕೆಯನ್ನು ಲೆಕ್ಕಿಸದೇ, ನೀರಿಗಿಳಿದು ಆಟವಾಡುತ್ತಿದ್ದ ವೇಳೆ ಅಲೆಗಳ ಅಬ್ಬರಕ್ಕೆ ಕೊಚ್ಚಿ ಹೋಗುತ್ತಿದ್ದ ಐವರು ಪ್ರವಾಸಿಗರನ್ನು ರಕ್ಷಿಸಿದ ಘಟನೆ ನಡೆದಿದೆ
ಬೆಂಗಳೂರಿನ ವಿದ್ಯಾರಣ್ಯಪುರದಿಂದ ಪ್ರವಾಸಕ್ಕೆ ಬಂದಿದ್ದ 10 ಮಂದಿಯ ತಂಡವು ತ್ರಾಸಿ-ಮರವಂತೆ ಬೀಚ್ನಲ್ಲಿ ಕಲ್ಲುಬಂಡೆಗಳ ಮೇಲೆ, ನೀರಿನಲ್ಲಿ ಮೋಜು-ಮಸ್ತಿ ಮಾಡುತ್ತಿದ್ದ ವೇಳೆ ನಾಲ್ವರು ಅಲೆಗಳ ಅಬ್ಬರಕ್ಕೆ ಸಿಲುಕಿ ಅಪಾಯಕ್ಕೆ ಸಿಲುಕಿದ್ದರು. ಅದೇ ವೇಳೆ ಕೂಡಲೇ ಅಲ್ಲಿದ್ದ ಲೈಫ್ಗಾರ್ಡ್ ಸಿಬಂದಿ, ಪ್ರವಾಸಿ ಮಿತ್ರರ ತಂಡ, ಆ್ಯಂಬುಲೆನ್ಸ್ ಚಾಲಕರು ಧಾವಿಸಿ ಸಮುದ್ರದ ನೀರಿನ ಅಲೆಗಳ ಅಬ್ಬರಕ್ಕೆ ಸಿಲುಕಿದ್ದ ಪ್ರವಾಸಿಗರನ್ನು ಸುರಕ್ಷಿತವಾಗಿ ದಡಕ್ಕೆ ತಂದಿದ್ದಾರೆ. ಇನ್ನೊಂದು ಪ್ರಕರಣದಲ್ಲಿ ಗೋವಾದಿಂದ ಬಂದಿದ್ದ ನಾಲ್ವರ ತಂಡದಲ್ಲಿದ್ದ ಮಹಿಳೆಯೊಬ್ಬರು ನೀರುಪಾಲಾಗುವ ಆತಂಕವಿದ್ದ ವೇಳೆ ಜತೆಗಿದ್ದವರೇ ಅವರನ್ನು ರಕ್ಷಿಸಿದ್ದಾರೆ. ಲೈಫ್ ಗಾರ್ಡ್ ಸಿಬಂದಿಯಾದ ಪೃಥ್ವಿರಾಜ್ ಉಪ್ಪುಂದ, ಪ್ರಮೋದ್ ರಾಜ್ ಉಪ್ಪುಂದ, ಬೀಚ್ ಉಸ್ತುವಾರಿ ಸಿಬಂದಿ ಸುರೇಶ್ ಕೊಡೇರಿ, ಚಾಲಕ ಇಬ್ರಾಹಿಂ ಗಂಗೊಳ್ಳಿ ಅಪಾಯಕ್ಕೆ ಸಿಲುಕಿದ್ದ ಪ್ರವಾಸಿಗರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ

