ಕುಂದಾಪುರ : ಭಾವನೆಗಳು, ಮಾತುಗಳು ಅಭಿವ್ಯಕ್ತಗೊಳ್ಳುವುದೇ ಭಾಷೆಯ ಮೂಲಕ. ಅತೀಯಾದ ತಂತ್ರಜ್ಞಾನದ ಬಳಕೆಯಲ್ಲಿ ತೊಡಗಿರುವ ಯುವಜನತೆ ಭಾಷಾ ಬಳಕೆಯ ಶುದ್ಧೀಕರಣ ಮತ್ತು ಎಚ್ಚರವನ್ನು ಅರಿಯಬೇಕು. ಓದಿನ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿಗಳು ತೊಡಗಿಕೊಳ್ಳುವುದರ ಜೊತೆಗೆ ಭಾಷೆ ಮತ್ತು ಭಾಷಾಂತರದ ಕುರಿತು ಅಭಿಮಾನವನ್ನು ಬೆಳೆಸಿಕೊಳ್ಳಬೇಕು ಎಂದು ಬಾರ್ಕೂರಿನ ನ್ಯಾಷನಲ್ ಪದವಿ ಪೂರ್ವ ಕಾಲೇಜಿನ ನಿವೃತ್ತ ಇಂಗ್ಲೀಷ್ ಉಪನ್ಯಾಸಕರಾದ ಶ್ರೀ ರಾಮ ಭಟ್ ಸಜಂಗದ್ದೆ ಹೇಳಿದರು.
ಅವರು ಇಲ್ಲಿನ ಕುಂದಾಪುರದ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಸಾಹಿತ್ಯ ವೇದಿಕೆಯ ಪ್ರಸ್ತುತ ಶೈಕ್ಷಣಿಕ ವರ್ಷದ ವಾರ್ಷಿಕ ಚಟುವಟಿಕೆಗಳನ್ನು ವಿದ್ಯಾರ್ಥಿಗಳ ಮತ್ತು ಪ್ರಾಧ್ಯಾಪಕರ ಪರಿಕಲ್ಪನೆಯಲ್ಲಿ ವಿನೂತನವಾಗಿ ಮೂಡಿಬಂದ ಲಿಂಗ್ವ ಕಲ್ಪವೃಕ್ಷಕ್ಕೆ ನೀರೆರೆಯುವ ಮೂಲಕ ಚಾಲನೆ ನಿಡಿದರು.
ಕಾಲೇಜಿನ ಉಪ-ಪ್ರಾಂಶುಪಾಲರಾದ ಡಾ| ಚೇತನ್ ಶೆಟ್ಟಿ ಕೋವಾಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ನಿರಂತರವಾಗಿ ತೊಡಗಿಕೊಂಡಾಗ ಭವಿಷ್ಯದ ಬದುಕಿನಲ್ಲಿ ಯಶಸ್ಸು ಸಾಧ್ಯ ಎಂದರು. ಇದೇ ಸಂದರ್ಭ ಐಕ್ಯೂಎಸಿ ಸಂಯೋಜಕಿ ಶ್ರೀಮತಿ ದೀಪಿಕಾ ಜಿ., ಕಾರ್ಯಕ್ರಮ ಸಂಯೋಜಕರಾದ ಶ್ರೀಮತಿ ಪ್ರವೀಣಾ ಎಮ್. ಪೂಜಾರಿ, ಶ್ರೀಮತಿ ಸ್ವಾತಿ ಜಿ. ರಾವ್, ಡಾ| ದೀಪಾ, ಶ್ರೀಮತಿ ಮೇಘಾ ಎಸ್. ಭಟ್, ವಿದ್ಯಾರ್ಥಿಗಳಾದ ಶರತ್, ರಕ್ಷಿತಾ ಉಪಸ್ಥಿತರಿದ್ದರು.ವಿದ್ಯಾರ್ಥಿಗಳಾದ ಸಿಂಚನಾ ಸ್ವಾಗತಿಸಿ, ವಾಣಿಶ್ರೀ ಉದ್ಘಾಟಕರನ್ನು ಪರಿಚಯಿಸಿ, ಶ್ರೇಯಾ ಖಾರ್ವಿ ಪ್ರಾರ್ಥಿಸಿ, ಲಾವಣ್ಯ ವಂದಿಸಿ, ನಿರೀಕ್ಷಾ ಕಾರ್ಯಕ್ರಮ ನಿರೂಪಿಸಿದರು.

