ಹೊಸದಿಲ್ಲಿ: ದೇಶದ ಬಡವರ್ಗ, ಮಧ್ಯಮ ವರ್ಗಗಳ ಕಲ್ಯಾಣ ಜತೆ ಮಹಿಳೆಯರ ಘನತೆ ಎತ್ತಿಹಿಡಿದು ಕಾಪಾಡಲು ಪೂರಕ ಹಲವು ಹೊಸ ಯೋಜನೆಗಳನ್ನು ತನ್ನ ನೇತೃತ್ವದ ಸರಕಾರ ಕೈಗೊಂಡಿದೆಯೆಂದು ಪ್ರಧಾನಿ ನರೇಂದ್ರ ಮೋದಿ ಪರೋಕ್ಷವಾಗಿ ಸುಳಿವು ನೀಡಿದ್ದಾರೆ.
ಈ ಬಾರಿಯ ಬಜೆಟ್ನಲ್ಲಿ ಮಾತೆಯರು ಪ್ರಧಾನ ಸ್ಥಾನ ಪಡೆಯಲಿದ್ದಾರೆಂಬುದು ತನ್ಮೂಲಕ ವೇದ್ಯವಾಗಿದೆ. ಕೇಂದ್ರ ಬಜೆಟ್ ಮಂಡನೆಗೆ ಮುನ್ನಾ ದಿನ ಶುಕ್ರವಾರ ಪ್ರಧಾನಿ ನಮೋ ಈ ಮಹತ್ತ್ವದ ಉಪಕ್ರಮಗಳ ಸುಳಿವು ನೀಡಿದ್ದಾರೆ.
ಮಾತೆಯರಿಗೆ ಸಮಾನ ಹಕ್ಕು
ಸಂಪತ್ತು ಕೊಡುವವಳು ಮಹಾಲಕ್ಷ್ಮಿ ದೇವಿ ಎಂದು ಬಜೆಟ್ ಅಧಿವೇಶನಕ್ಕೆ ಮುನ್ನ ಸುದ್ದಿಗಾರರಲ್ಲಿ ಸಾಂಪ್ರದಾಯಿಕವಾಗಿ ಮಾತು ಆರಂಭಿಸಿದ ಪ್ರಧಾನಿ ನಮೋ, ದೇಶದ ಬಡವರು ಹಾಗೂ ಮಧ್ಯಮ ವರ್ಗದವರಿಗೆ ವಿಶೇಷವಾಗಿ ಅನುಗ್ರಹಿಸೆಂದು ಶ್ರೀ ಲಕ್ಷ್ಮೀ ದೇವಿಯಲ್ಲಿ ತಾನು ಪ್ರಾರ್ಥಿಸಿರುವೆ.
ಮತ-ಪಂಥಗಳ ಭೇದರಹಿತವಾಗಿ ಎಲ್ಲಾ ಮಹಿಳೆಯರು ಸಮಾನವಾಗಿ ಹಕ್ಕುಗಳನ್ನು ಹೊಂದುವಂತಾಗಬೇಕು. ಈ ನಿಟ್ಟಿನಲ್ಲಿ ಮಹತ್ತ್ವದ ನಿರ್ಧಾರಗಳನ್ನು ಇಂದೀಗ ಶುರುವಾಗಿರುವ ಬಜೆಟ್ ಅಧಿವೇಶನದಲ್ಲಿ ಅಂಗೀಕರಿಸಲಾಗುವುದು ಎಂದರು. ಆಳುವ ಬಿಜೆಪಿಯ ಕಲ್ಯಾಣ ಉಪಕ್ರಮಗಳಲ್ಲಿ ಮುಖ್ಯ ಸ್ಥಾನ ಪಡೆದಿರುವ ಮಾತೆಯರ ಘನತೆ ಗೌರವ ಕಾಪಾಡುವುದು ತೀರಾ ಮುಖ್ಯ ಎಂದರು. ಪ್ರಧಾನಿ ನಮೋ ಪ್ರತಿಪಾದಿಸಿದರು.