54
ಉಡುಪಿ : ದೊಡ್ಡಣಗುಡ್ಡೆ ಶ್ರೀಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಧರ್ಮದರ್ಶಿ ರಮಾನಂದ ಗುರೂಜಿ ಮಾರ್ಗ ದರ್ಶನದಲ್ಲಿ ಪುರೋಹಿತ ಗಣೇಶ್ ಸರಳಾಯ, ವೇ|ಮೂ। ವಿಖ್ಯಾತ್ ಭಟ್ ನೇತೃತ್ವದಲ್ಲಿ ನೆರವೇರುತ್ತಿರುವ ನವರಾತ್ರಿ ಮಹೋತ್ಸವ ಅಂಗವಾಗಿ 2ರಂದು ವಿಜಯದಶಮಿ ಪರ್ವಕಾಲದಲ್ಲಿ ಕ್ಷೇತ್ರದ ವತಿಯಿಂದ ಬಹು ವಿಶೇಷವೂ, ಅಪರೂಪವೂ ಆದ ತ್ರಿಶಕ್ತಿ ಮಹಾಯಾಗ ಸಮರ್ಪಣೆಗೊಳ್ಳಲಿದೆ.
ಯಾಗವು ಬೆಳಗ್ಗೆ 7.30ಕ್ಕೆ ಸಾಮೂಹಿಕ ಪ್ರಾರ್ಥನೆಯೊಂದಿಗೆ ಏಕಕಾಲದಲ್ಲಿ ಮೂರು ಕುಂಡಗಳಲ್ಲಿ ಆರಂಭವಾಗಲಿದೆ. ಏಕಕಾಲದಲ್ಲಿ ಮೂರು ಕುಂಡಗಳಲ್ಲಿಯೂ 10.30ಕ್ಕೆ ಪೂರ್ಣಾಹುತಿ ಕಾಣಲಿದೆ. ವಿವಿಧ ಪೂಜೆ, ಆರಾಧನೆಗಳ ಬಳಿಕ ಮಹಾಪೂಜೆ, ಪಲ್ಲಪೂಜೆ, ಅನ್ನಸಂತರ್ಪಣೆ ನೆರವೇರಲಿದೆ. ಅಂದು ಸಂಜೆ ಬಲಿ ಉತ್ಸವ ಸಹಿತ ಶ್ರೀರಂಗ ಪೂಜಾ ಮಹೋತ್ಸವ, ಪಲ್ಲಕ್ಕಿ ಉತ್ಸವ, ವಸಂತ ಪೂಜೆ ಅನಂತರ ಮಹಾಮಂತ್ರಾಕ್ಷತೆ, ಅನ್ನಸಂತರ್ಪಣೆ ಜರಗಲಿದೆ. ಅ.3ರಂದು ಮಹಾ ಸಂಪ್ರೋಕ್ಷಣೆ ನೆರವೇರಲಿದೆ.
ಯಾಗ ದ್ರವ್ಯ ಸಮರ್ಪಣೆಗೆ ಅವಕಾಶ ಯಾಗದ ಪೂಣಾಹುತಿಯಲ್ಲಿ ಪ್ರಮುಖವಾಗಿ ಸೀರೆ, ಕಬ್ಬು, ಎಳ್ಳು, ತಾವರೆ, ಮಾದ್ರಫಲ, ಬಿಲ್ವಪತ್ರೆ, ತುಪ್ಪ ಮೊಸರು, ಹಾಲು, ಸಾಸಿವೆ, ತೆಂಗಿನಕಾಯಿ, ಅರಳು, ಕೇಸರಿ, ಗುಗ್ಗಳ, ಅಗರು, ಗಂಧ, ಬಾಳೆಹಣ್ಣು ಅರಶಿನ, ಕುಂಕುಮ, ಸಿಂಗಾರದ ಹೂವು, ಕೇಪಳ ಹೂವು, ಗರಿಕೆ ಹುಲ್ಲು ಪಚ್ಚ ಕರ್ಪೂರ ಸಮರ್ಪಿಸಲಾಗುತ್ತದೆ ಇಲ್ಲಿ ಸಮರ್ಪಿಸುವ ಸೇವೆಯಿಂದ ನಿಶ್ಚಿತ ಫಲ ನಿಶ್ಚಯ ಎಂದು ಮನಗಾಣುವ ಭಕ್ತರು ಮತ್ತೊಮ್ಮೆ ತಮ್ಮ ಸೇವೆಯನ್ನು ನಿರಂತರವಾಗಿರಿಸಿಕೊಂಡ ನೆಲೆಯಲ್ಲಿ ನವರಾತ್ರಿ, ದಶಮಿಯ 10 ದಿನಗಳ ಕಾಲ 21 ಚಂಡಿಕಾಯಾಗಗಳು, ಜೋಡಿ ದುರ್ಗಾ ನಮಸ್ಕಾರ ಪೂಜೆ, ಜೋಡಿ ಲಲಿತಾ ಸಹಸ್ರ ಕದಳಿಯಾಗಗಳು ಸಮರ್ಪಿಸಲ್ಪಡುತ್ತಿದೆ. ಯಾಗಕ್ಕೆ ಸಮರ್ಪಿಸುವ ದ್ರವ್ಯವನ್ನು ನೀಡುವ ಭಕ್ತರು ಕ್ಷೇತ್ರವನ್ನು ಸಂಪರ್ಕಿಸಬಹುದು ಎಂದು ಕೇತ್ರದ ಉಸ್ತುವಾರಿ ಕುಸುಮಾ ನಾಗರಾಜ್ ತಿಳಿಸಿದ್ದಾರೆ

