ಕೋಟ : ಸಾಲಿಗ್ರಾಮದ ಶ್ರೀ ಗುರು ನರಸಿಂಹ ಮತ್ತು ಆಂಜನೇಯ ದೇವರ ಸನ್ನಿಧಿಯಲ್ಲಿ ಸಾಮೂಹಿಕ ಫಲ ಪ್ರಾರ್ಥನೆಯೊಂದಿಗೆ ದ್ವಾದಶಾವರ್ತನ ಪವಮಾನ ಪಾರಾಯಣ ಸಹಿತ ಪವಮಾನ ಹೋಮ, ದ್ವಾದಶ ನಾರಿಕೇಳ ಗಣಯಾಗ ಮುಂತಾದ ಧಾರ್ಮಿಕ ಕಾರ್ಯಕ್ರಮಗಳಿಗೆ ದೇವಳದ ತಂತ್ರಿ ಶ್ರೀ ಕೃಷ್ಣ ಸೋಮಯಾಜಿಯವರ ಮಾರ್ಗದರ್ಶನದಲ್ಲಿ ಶ್ರೀ ದೇವರ ಅನುಗ್ರಹವನ್ನು ಕೋರಲಾಯಿತು.
ದೇವಳದ ಅಧ್ಯಕ್ಷ ಡಾ.ಕೆ.ಎಸ್.ಕಾರಂತ ದಂಪತಿ, ಕಾರ್ಯದರ್ಶಿ ಲಕ್ಷ್ಮೀ ನಾರಾಯಣ ತುಂಗ ,ಕೋಶಾಧಿಕಾರಿ ಪರಶುರಾಮ ಭಟ್ಟ, ಸದಸ್ಯರಾದ ಎ.ವಿ.ಶ್ರೀಧರ ಕಾರಂತ, ಮೀಯಪದವು ಎಂ.ಆರ್.ಶ್ರೀಧರ ರಾವ್ ದಂಪತಿ,ಗುಂಡ್ಮಿ ಚಂದ್ರಶೇಖರ ಉಪಾಧ್ಯ, ಕಾರ್ಕಡ ತಾರಾನಾಥ ಹೊಳ್ಳ, ಕೂಟ ಮಹಾ ಜಗತ್ತಿನ ಕೇಂದ್ರ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸುರೇಶ ತುಂಗ, ಪಾರಂಪಳ್ಳಿ ಶ್ರೀನಿವಾಸ ಉಪಾಧ್ಯ, ಗುಂಡ್ಮಿ ವೆಂಕಟೇಶ ಮಯ್ಯ, ಗ್ರಾಮ ಮೊಕ್ತೇಸರರು ಮತ್ತು ಊರ ಹತ್ತು ಸಮಸ್ತರು ಹಾಗೂ ಭಕ್ತ ವೃಂದದವರು ಉಪಸ್ಥಿತರಿದ್ದರು.
ಮಾ.4 ಮಂಗಳವಾರದಿಂದ ಮಾ.8 ರ ಶನಿವಾರದ ತನಕ ಲಕ್ಷ ಮೋದಕ ಗಣಯಾಗವು ಸಂಪನ್ನಗೊಳ್ಳಲಿದ್ದು, ಅದೇ ದಿನ ಸಂಜೆ ನೂತನ ಶ್ರೀ ಗುರುಧಾಮ ಯಾತ್ರಿ ನಿವಾಸದಲ್ಲಿ ವಾಸ್ತು ಪೂಜೆ, ರಾಕ್ಷೋಘ್ನ ಹೋಮ, ಸುದರ್ಶನ ಹೋಮ ಮತ್ತು ಮಾ.9ರಂದು ಭಾನುವಾರದಂದು ದೇವಳದಲ್ಲಿ 1008 ನೃಸಿಂಹಹೋಮವನ್ನು ನಡೆಸಲಾಗುವುದು.
ಅದೇ ದಿನ ಹಿರಿಯ ನ್ಯಾಯವಾದಿ, ಕರ್ನಾಟಕ ಸರಕಾರದ ಪೂರ್ವ ಎಡ್ವಕೇಟ್ ಜನರಲ್ ಉದಯ ಹೊಳ್ಳ ಯಾತ್ರಿ ನಿವಾಸವನ್ನು ಉದ್ಘಾಟಿಸಲಿದ್ದು, ಅಧ್ಯಕ್ಷ ಡಾ.ಕೆ.ಎಸ್.ಕಾರಂತರ ಅಧ್ಯಕ್ಷತೆಯಲ್ಲಿ ಜರುಗುವ ಉದ್ಘಾಟನಾ ಸಮಾರಂಭದಲ್ಲಿ ಅಭ್ಯಾಗತರಾಗಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ವಿಶ್ರಾಂತ ಆಡಳಿತ ಧರ್ಮದರ್ಶಿ ಸೂರ್ಯನಾರಾಯಣ ಉಪಾಧ್ಯ, ಇಂದ್ರಪ್ರಸ್ಥ ಪ್ರಕಾಶ ಮಯ್ಯ, ಸಾಲಿಗ್ರಾಮ ಪಟ್ಟಣ ಪಂಚಾಯತಿಯ ಅಧ್ಯಕ್ಷೆ ಸುಕನ್ಯಾ ಶೆಟ್ಟಿ ಮತ್ತು ಕೂಟ ಮಹಾ ಜಗತ್ತಿನ ಕೇಂದ್ರ ಸಂಸ್ಥೆಯ ಅಧ್ಯಕ್ಷ ಸತೀಶ ಹಂದೆಯವರು ಭಾಗವಹಿಸಲಿದ್ದು , ದಾನಿಗಳನ್ನು ಅಭಿನಂದಿಸಲಾಗುವುದು. ಕಾರ್ಯದರ್ಶಿ ಲಕ್ಷ್ಮೀ ನಾರಾಯಣ ತುಂಗ ,ಕೋಶಾಧಿಕಾರಿ ಪರಶುರಾಮ ಭಟ್ಟ, ಸದಸ್ಯರಾದ ಎ.ವಿ.ಶ್ರೀಧರ ಕಾರಂತ ಮತ್ತಿತರರು ಇದ್ದರು

