ಬರ್ಮಿಂಗಮ್ : ಇಂಗ್ಲೆಂಡಿನೆದುರು ಮೊದಲ ಟೆಸ್ಟ್ ಸೋತ ಭಾರತವು ಇಂದಿನಿಂದ ಆರಂಭವಾಗಲಿರುವ ಎರಡನೇ ಟೆಸ್ಟಿನಲ್ಲಿ ತಿರುಗಿ ಬೀಳಲು ಅಣಿಯಾಗಿದೆ. ಆದರೆ ತಿರುಗಿ ಬೀಳಬೇಕಾದರೆ ಮೊದಲಾಗಿ ತಂಡವು ಹಲವಾರು ಸಮಸ್ಯೆಗಳನ್ನು ನಿವಾರಿಸಿಕೊಳ್ಳುವುದು ಅಗತ್ಯವಾಗಿದೆ.
ಭಾರತೀಯ ತಂಡಕ್ಕಿರುವ ಅತ್ಯಂತ ಮುಖ್ಯ ಸವಾಲೆಂದರೆ ಸೂಕ್ತವಾದ ತಂಡವನ್ನು ಆಯ್ಕೆ ಮಾಡುವುದು ಮೊದಲ ಟೆಸ್ಟಿನಲ್ಲಿ ಕೆಲವಾರು ಲೋಪಗಳು ಎದ್ದುಕಂಡಿರುವುದರಿಂದ ಎರಡನೇ ಟೆಸ್ಟಿಗೆ ತಂಡದಲ್ಲಿ ಹಲವಾರು ಬದಲಾವಣೆ ಮಾಡುವುದು ಅನಿವಾರ್ಯವಾಗಿದೆ. ಯಾವೆಲ್ಲ ಬದಲಾವಣೆಗಳನ್ನು ಮಾಡಬೇಕು ಎಂಬುದೇ ತಂಡಕ್ಕೆ ದೊಡ್ಡ ಜಿಜ್ಞಾಸೆಯಾಗಿದೆ.
ಎಲ್ಲರೆದುರು ಇರುವ ಅತೀ ಮುಖ್ಯ ಪ್ರಶ್ನೆಯೆಂದರೆ ಜಸ್ಪ್ರೀತ್ ಬೂಮ್ರಾ ಎರಡನೇ ಟೆಸ್ಟಿನಲ್ಲಿ ಆಡುವರೆ ಇಲ್ಲವೆ ಎಂಬುದು. ಬೂಮ್ರಾ ಅವರನ್ನು ಕೇವಲ ಮೂರು ಟೆಸ್ಟ್ ಗಳಲ್ಲಿ ಮಾತ್ರ ಆಡಿಸಲಾಗುವುದು ಎಂದು ಕೋಚ್ ಗಂಭೀರ್ ಮೊದಲೇ ಘೋಷಿಸಿದ್ದಾರೆ. ಹಾಗಾಗಿ ಬೂಮ್ರಾ ಇಂದಿನ ಪಂದ್ಯದಲ್ಲಿ ಆಡುವರೆ ಇಲ್ಲವೆ ಎಂಬುದು ಖಚಿತವಾಗಿಲ್ಲ. ಅವರಿಗೆ ವಿಶ್ರಾಂತಿ ನೀಡಿ ಮೂರನೇ ಪಂದ್ಯಕ್ಕೆ ಆಡಿಸುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ.
ಆದರೆ ಭಾರತವು ಈಗಾಗಲೆ ಒಂದು ಟೆಸ್ಟ್ ಸೋತು ಹಿನ್ನಡೆ ಸಾಧಿಸಿರುವುದರಿಂದ ಪ್ರಮುಖ ಬೌಲರ್ನನ್ನು ಎರಡನೇ ಟೆಸ್ಟಿಗೆ ಕೈಬಿಡುವುದು ತರವಲ್ಲ ಎಂಬ ವಾದವೂ ಕೇಳುತ್ತಿದೆ. ಹಾಗಾಗಿ ಬೂಮ್ರಾ ಆಡಬೇಕು ಮತ್ತು ಭಾರತವು ಸಮಬಲ ಸಾಧಿಸಲು ಯತ್ನಿಸಬೇಕು ಎಂಬ ಸಲಹೆಯೂ ಬರುತ್ತಿದೆ.
ಇದೇವೇಳೆ, ಬೂಮ್ರಾ ಈ ಪಂದ್ಯದಲ್ಲಿ ಆಡುವರೆ ಇಲ್ಲವೆ ಎಂಬುದನ್ನು ಕೊನೆಯ ಕ್ಷಣದಲ್ಲಿ ನಿರ್ಧರಿಸಲಾಗುವುದು ಎಂದು ಬೌಲಿಂಗ್ ಕೋಚ್ ಡೋಶೆಟ್ ಹೇಳಿದ್ದಾರೆ.
ಎದುರಾಳಿ ತಂಡಕ್ಕೆ ಅಚ್ಚರಿ ಸೃಷ್ಟಿಸುವುದೂ ಇದರ ಹಿಂದಿನ ಉದ್ದೇಶವಾಗಿರಬೇಕು ಎಂದೆನ್ನಲಾಗಿದೆ. ಅದರ ಜತೆಗೇ ಹವಾಮಾನ ಮತ್ತು ಪಿಚ್ನ ಮಾದರಿಯನ್ನು ಅನುಸರಿಸಿ ಬೂಮ್ರಾರನ್ನು ಸೇರಿಸಿಕೊಳ್ಳಬೇಕೆ ಬೇಡವೆ ಎಂಬುದನ್ನು ನಿರ್ಧರಿಸಲಾಗುವುದು

