ಬೆಂಗಳೂರು : ಆಪರೇಷನ್ ಸಿಂದೂರ ಯಶಸ್ಸಿನ ಹಿನ್ನೆಲೆಯಲ್ಲಿ ಸೇನೆಯೊಂದಿಗೆ ರಾಷ್ಟ್ರ ರಕ್ಷಣೆಗಾಗಿ ನಾಗರಿಕರು ಎಂಬ ವಿಷಯದೊಂದಿಗೆ ಬಿಜೆಪಿ ಬೃಹತ್ ತಿರಂಗಾ ಯಾತ್ರೆ ನಡೆಸಿ ಸೇನಾನಿಗಳಿಗೆ ಧನ್ಯವಾದ ಸಲ್ಲಿಸಿತು.
ಗುರುವಾರ ಬೆಂಗಳೂರು ನಗರದ ಮಂತ್ರಿಮಾಲ್ನ ಸಂಪಿಗೆ ರಸ್ತೆಯ ಶಿರೂರು ಆಟದ ಮೈದಾನದಿಂದ ಮಲ್ಲೇಶ್ವರ 18ನೇ ಅಡ್ಡರಸ್ತೆವರೆಗೆ 1.5 ಕಿ.ಮೀ. ತಿರಂಗಾ ಯಾತ್ರೆಯಲ್ಲಿ 9 ಅಡಿ ಅಗಲ ಮತ್ತು 1,500 ಅಡಿ ಉದ್ದದ ರಾಷ್ಟ್ರಧ್ವಜದ ಮೆರವಣಿಗೆ ನಡೆಯಿತು ಮಲ್ಲೇಶ್ವರದ 18 ಅಡ್ಡರಸ್ತೆಯ ಆಟದ ಮೈದಾನ ತಲುಪಿದ ಬಳಿಕ 205 ಅಡಿ ಅಗಲ, 630 ಅಡಿ ಉದ್ದದ ಮತ್ತೊಂದು ಬೃಹತ್ ರಾಷ್ಟ್ರಧ್ವಜದ ಪ್ರದರ್ಶನ ನಡೆಯಿತು. ಅಲ್ಲದೆ, ತಿರಂಗಾ ಯಾತ್ರೆ ಮೆರವ ಣಿಗೆಯಲ್ಲಿ ಪ್ರಚಾರ ವಾಹನಕ್ಕೆ ಅಳವಡಿಸಿದ್ದ ಸೈನಿಕ ವೇಷಧಾರಿಯಾಗಿ ಕೈಯಲ್ಲಿ ಬಂದೂಕು ಹಿಡಿದು ಯೋಧರಂತೆ ಕಾಣುವ ಮೋದಿ ಕಟೌಟ್ ಪ್ರದರ್ಶನ ಗಮನಸೆಳೆಯಿತು. ಆಪರೇಷನ ಸಿಂದೂರ ಎಂಬ ಟೋಪಿ ಧರಿಸಿ, ರಾಷ್ಟ್ರಧ್ವಜ ಹಿಡಿದು ಜನ ಹೆಜ್ಜೆ ಹಾಕಿದರು.
ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್, ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ರಾಜ್ಯ ಬಿಜೆಪಿ ಉಸ್ತುವಾರಿ ರಾಧಾಮೋಹನ್ ದಾಸ್ ಅಗರ್ವಾಲ್, ರಾಜ್ಯ ಸಹ-ಉಸ್ತುವಾರಿ ಸುಧಾಕರ್ರೆಡ್ಡಿ, ಮಾಜಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ್ ಸೇರಿ ಹಲವರು ಭಾಗವಹಿಸಿದ್ದರು.

