ಮಂಗಳೂರು : ಧರ್ಮಸ್ಥಳದಲ್ಲಿ ನಡೆದ ಎಸ್ಐಟಿ ತನಿಖೆಯಲ್ಲಿ ಯಾವುದೇ ಕುರುಹು ಸಿಗದ ಬೆನ್ನಲ್ಲೇ ಶ್ರೀ ಕ್ಷೇತ್ರದ ಭಕ್ತರ ಧ್ವನಿ ಹೆಚ್ಚಾಗಿದ್ದು, ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ನಡುವೆ ಸರ್ಕಾರದ ವಿರುದ್ಧ ಬಿಜೆಪಿ ಮುಗಿಬಿದ್ದಿದ್ದು, ಹಿಂದೂ ಸಂಘಟನೆಗಳೂ ಬೆಂಗಳೂರಿನಲ್ಲಿ ಹೋರಾಟಕ್ಕೆ ಮುಂದಾಗಿವೆ.
ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ನೇತೃತ್ವದಲ್ಲಿ ಸಾವಿರಾರು ಕಾರ್ಯಕರ್ತರು ಧರ್ಮಸ್ಥಳಕ್ಕೆ ಬಂದಿಳಿದಿದ್ದಾರೆ. 400ಕ್ಕೂ ಹೆಚ್ಚು ಕಾರುಗಳಲ್ಲಿ ಆಗಮಿಸಿದ ಸಾವಿರಾರು ಕಾರ್ಯಕರ್ತರು ಹಾಗೂ ಹಿಂದುಗಳು ಭಗವಾಧ್ವಜ ಹಿಡಿದು, ಕೇಸರಿ ಶಾಲು ಧರಿಸಿ ಧರ್ಮಸ್ಥಳಕ್ಕೆ ಆಗಮಿಸಿದ್ದಾರೆ.
ಮಧ್ಯಾಹ್ನ ಸುಮಾರು 3.00 ಗಂಟೆಗೆ ವಿಶ್ವನಾಥ್ ನೇತೃತ್ವದ ತಂಡ ಧರ್ಮಸ್ಥಳ ತಲುಪಿದೆ. ದೇವರ ದರ್ಶನ ಪಡೆದು ಧರ್ಮಸ್ಥಳದಲ್ಲೇ ರಾತ್ರಿ ವಾಸ್ತವ್ಯ ಹೂಡಿದ್ದರು.
ನೆಲಮಂಗಲ-ಕುಣಿಗಲ್ ರಸ್ತೆಯ ಕುಣಿಗಲ್ ಟೋಲ್ಗೇಟ್ನಿಂದ ಹಾಸನದಿಂದ ಸಕಲೇಶಪುರದ ಮೂಲಕ ಶಿರಾಡಿಘಾಟ್ ಯಾತ್ರೆ ಆರಂಭಗೊಂಡು ರಸ್ತೆ ಮಾರ್ಗವಾಗಿ ರ್ಯಾಲಿ ಧರ್ಮಸ್ಥಳಕ್ಕೆ ತಲುಪಿದೆ. ರ್ಯಾಲಿಯಲ್ಲಿ ಜನ ಭಗವಾಧ್ವಜ ಹಿಡಿದು ಕೇಸರಿ ಶಾಲು ಧರಿಸಿ ಪಾಲ್ಗೊಂಡಿದ್ದರು.
ಹಿಂದೂ ಹಕ್ಕುಗಳನ್ನು ಎತ್ತಿಹಿಡಿಯಲು ಮತ್ತು ಕರ್ನಾಟಕದಾದ್ಯಂತ ದೇವಾಲಯದ ಪಾವಿತ್ಯ ರಕ್ಷಿಸಲು ಧರ್ಮಸ್ಥಳದಲ್ಲಿ ಪ್ರತಿಜ್ಞೆ ತೆಗೆದುಕೊಳ್ಳುವುದು ರ್ಯಾಲಿಯ ಪ್ರಮುಖ ಉದ್ದೇಶ ಎಂದು ಶಾಸಕ ಎಸ್. ಆರ್. ವಿಶ್ವನಾಥ್ ಹೇಳಿದರು.

