ಬೆಂಗಳೂರು : ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿ ಪ್ರಜೆಗಳು ರಾಷ್ಟ್ರೀಯ ಭದ್ರತೆಗೆ ಒಡ್ಡಿರುವ ಅಪಾಯವೆಂದು ಅದನ್ನು ಗಂಭೀರವಾಗಿ ಪರಿಗಣಿಸಬೇಕು ಮತ್ತು ಈ ವಿಚಾರವಾಗಿ ಅರ್ಧ ಗಂಟೆ ಕಾಲಾವಧಿ ಚರ್ಚೆಗೆ ನೀಡಬೇಕೆಂದು ಬಿಜೆಪಿ ಶಾಸಕ ವಿ. ಸುನೀಲ್ ಕುಮಾರ್ ಒತ್ತಾಯಿಸಿದರು.
ಪ್ರಶೋತ್ತರ ಅವಧಿಯಲ್ಲಿ ಬಿಜೆಪಿ ಶಾಸಕ ಮಾನಪ್ಪ ಡಿ. ವಜ್ಜಲ್ ಅವರ ಪ್ರಶ್ನೆಗೆ ಸರ್ಕಾರ ರಾಜ್ಯದ 15 ಜಿಲ್ಲೆಗಳಲ್ಲಿ 556 ಅಕ್ರಮ ವಿದೇಶಿ ಪ್ರಜೆಗಳಿದ್ದಾರೆ ಎಂಬ ಉತ್ತರ ನೀಡಿತು. ಇದಕ್ಕೆ ವಜ್ಜಲ್ ವಿಜಯಪುರ ಜಿಲ್ಲೆಯೊಂದರಲ್ಲಿ 15 ಸಾವಿರ ಅಕ್ರಮ ವಿದೇಶಿ ವಲಸಿಗರಿದ್ದಾರೆಂದು ಮಾಧ್ಯಮ ವರದಿ ಮಾಡಿದೆ ಎಂದರು.
ಅದಕ್ಕೆ ಪೂರಕವಾಗಿ ಮಾತನಾಡಿದ ಸುನೀಲ್ ಕುಮಾರ್, ಈ ಪ್ರಕರಣವನ್ನು ಸರ್ಕಾರ ರಾಜ್ಯ ಭದ್ರತೆಗೆ ಒಡ್ಡಿರುವ ಅಪಾಯವೆಂದು ಗಂಭೀರವಾಗಿ ಪರಿಗಣಿಸಬೇಕು. ಆಕ್ರಮ ವಲಸಿಗರು ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಚಿಕ್ಕಮಗಳೂರು, ಕೊಡಗಿನ ಕಾಫಿ ಎಸ್ಟೇಟ್ಗಳಲ್ಲಿ ಅಕ್ರಮ ಬಾಂಗ್ಲಾದೇಶಿಯರಿದ್ದಾರೆ. ನಮ್ಮ ಜಿಲ್ಲೆಗಳಲ್ಲಿ ಕೂಲಿ ಕಾರ್ಮಿಕರಾಗಿದ್ದಾರೆ ಎಂದರು
ಪ್ರತಿಪಕ್ಷ ನಾಯಕ ಆರ್. ಅಶೋಕ, ಅಕ್ರಮ ವಲಸಿಗರ ಪಿಡುಗು ಆಗಿದೆ. ಕಾಲೇಜುಗಳಲ್ಲಿ ನೈಜೀರಿಯಾ, ಆಫ್ರಿಕಾ ದೇಶಗಳಿಂದ ಬಂದಿರುವವರು ಮಾದಕ ದ್ರವ್ಯಗಳನ್ನು ಮಾರಾಟ ಮಾಡುತ್ತಿದ್ದಾರೆ. ಪೊಲೀಸರ ಮೇಲೆಯೇ ಹಲ್ಲೆ ನಡೆಸುತ್ತಿದ್ದಾರೆ. ಅವರದ್ದೊಂದು ಜಾಲವೇ ಇದೆ. ಆದ್ದರಿಂದ ಅರ್ಧ ತಾಸಿನ ಚರ್ಚೆಗೆ ಅವಕಾಶ ನೀಡಬೇಕೆಂದು ಕೇಳಿದರು. ಅಂತಿಮವಾಗಿ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅರ್ಧ ಗಂಟೆ ಕಾಲಾವಧಿ ಚರ್ಚೆಗೆ ಅವಕಾಶ ನೀಡುವುದಾಗಿ ಪ್ರಕಟಿಸಿದರು.

