ಬಂಟ್ವಾಳ : ನಾಗಮಂಗಲದಲ್ಲಿ ಗಣೇಶೋತ್ಸವ ವಿಸರ್ಜನಾ ಮೆರವಣಿಗೆ ಸಂದರ್ಭ ನಡೆದ ಅಹಿತಕರ ಘಟನೆ ಜೀವಂತವಿರುವಾಗಲೇ ದಕ್ಷಿಣ ಕನ್ನಡ ಜಿಲ್ಲೆಯ ಕೋಮು ಸೂಕ್ಷ್ಮ ಪ್ರದೇಶವೆಂದೇ ಗುರುತಿಸಲಾದ ‘ಬಿ.ಸಿ.ರೋಡಿನಲ್ಲಿಯು ಸವಾಲು- ಪ್ರತಿಸವಾಲಿನ ಹಿನ್ನಲೆಯಲ್ಲಿ ಸೋಮವಾರ ಕೆಲವು ಹೊತ್ತುಗಳ ಕಾಲ ಉದ್ವಿಗ್ನ ಸ್ಥಿತಿ ಉಂಟಾಯಿತು.
ಖಂಡನಾ ಸಭೆಯೊಂದರಲ್ಲಿ ವಿಶ್ವ ಹಿಂದೂ ಪರಿಷತ್ತಿನ ಪ್ರಾಂತ ಕಾರ್ಯವಾಹ ಶರಣ್ ಪಂಪ್ ವೆಲ್ ಆಡಿದ್ದರೆನ್ನಲಾದ ಹೇಳಿಕೆಯೊಂದಕ್ಕೆ ಉತ್ತರವಾಗಿ ಬಂಟ್ವಾಳ ಪುರಸಭೆಯ ಮಾಜಿ ಕಾಂಗ್ರೆಸ್ ಮುಖಂಡರಾದ ಮಹಮ್ಮದ್ ಶರೀಫ್ ಹಾಗೂ ಸದಸ್ಯ ಹಸೈನಾರ್, ತಾಕತ್ತಿದ್ದರೆ ಈದ್ ಮೆರವಣಿಗೆ ವೇಳೆ ಬಂಟ್ವಾಳಕ್ಕೆ ಬನ್ನಿ ಎಂಬ ವಾಯ್ಸ್ ಮೆಸೇಜ್ ಹರಿಯಬಿಟ್ಟಿದ್ದು ಉದ್ವಿಗ್ನತೆಗೆ ಕಾರಣವಾಯಿತು.
ಸಂಘಪರಿವಾರದ ಸಂಘಟನೆಗಳು ಸವಾಲನ್ನು ಸ್ವೀಕರಿಸಿ ಸೋಮವಾರ ಬಿ.ಸಿ.ರೋಡ್ ಚಲೋ’ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಸೋಮವಾರ ಬೆಳಿಗ್ಗೆ 7 ಗಂಟೆಯಿಂದಲೇ ಬಿ.ಸಿ.ರೋಡಿನಲ್ಲಿ ಸಂಘಪರಿವಾರ ಸಂಘಟನೆಯ ಕಾರ್ಯಕರ್ತರು, ಪ್ರಮುಖರು, ಯುವಕರು ಸೇರಿ ಸಾವಿರಕ್ಕೂ ಅಧಿಕ ಮಂದಿ ಶ್ರೀ ರಕ್ತೇಶ್ವರೀ ದೇವಿ ದೇವಸ್ಥಾನದ ಬಳಿ ಜಮಾಯಿಸಿದ್ದರು. ಪರಿಸ್ಥಿತಿಯನ್ನು ಅರಿತಿದ್ದ ಪೊಲೀಸರು ಯುವಕರ ಗುಂಪು ಹೆದ್ದಾರಿಗೆ ಬಾರದಂತೆ ದೇವಸ್ಥಾನದ ಮುಂಭಾಗದಲ್ಲಿ ಅಡ್ಡಲಾಗಿ ಬ್ಯಾರಿಕೇಡ್ ಇರಿಸಿದ್ದರು. ವಿ.ಹಿಂ.ಪ.ಮುಖಂಡ ಶರಣ್ ಪಂಪ್ ವೆಲ್ ಮತ್ತು ಬಿ.ಸಿ.ರೋಡು ಚಲೋ ಕರೆ ನೀಡಿದ್ದ ಪುನೀತ್ ಅತ್ತಾವರ ಅವರು ದೇವಸ್ಥಾನದ ಬಳಿ ಕಾರಿಳಿಯುತ್ತಿದ್ದಂತೆ ಅದಾಗಲೇ ನಿರೀಕ್ಷೆಗೂ ಮೀರಿ ಜಮಾಯಿಸಿದ್ದ ಹಿಂದೂ ಕಾರ್ಯಕರ್ತರು ಶರಣ್ ಪಂಪ್ವೆಲ್ ಅವರನ್ನು ಎತ್ತಿ ಜೈಕಾರ, ಘೋಷಣೆ ಕೂಗಿದರು. ಸವಾಲು ಒಡ್ಡಿದ್ದ ಶರೀಫ್ ವಿರುದ್ಧ ಘೋಷಣೆ ಹಾಕಲಾಯಿತು.
ಶರಣ್ ಪಂಪ್ವೆಲ್ ಅವರನ್ನು ಎತ್ತಿಕೊಂಡೆ ಕಾರ್ಯಕರ್ತರು ಪೊಲೀಸರ ತಡೆಯನ್ನು ಲೆಕ್ಕಿಸದೆ ಹೆದ್ದಾರಿಯತ್ತ ಸಾಗಿದರು. ಈ ವೇಳೆ ಪೊಲೀಸರು ಹಾಗೂ ಕಾರ್ಯಕರ್ತರ ನಡುವೆ ನೂಕಾಟ ತಳ್ಳಾಟದ ಹೈಡ್ರಾಮ ನಡೆಯಿತು. ಪರಿಸ್ಥಿತಿ ಕೈ ಮೀರಿ ಹೋಗುವ ಹಂತಕ್ಕೆ ತಲುಪಿದಾಗ ಪೊಲೀಸರು ಬಸ್ಗಳನ್ನು ರಸ್ತೆಗೆ ಅಡ್ಡಲಾಗಿ ಇಟ್ಟು ಕಾರ್ಯಕರ್ತರಿಗೆ ತಡೆಯೊಡ್ಡಿದರು. ಇದರಿಂದಾಗಿ ಬಿಗುವಿನ ವಾತಾವರಣ ಉಂಟಾಯಿತು. ಒಂದು ಹಂತದಲ್ಲಿ ಪರಿಸ್ಥಿತಿ ಬಿಗುವಾಗುತ್ತಿದಂತೆ ಮುಂಜಾಗ್ರತಾ ಕ್ರಮವಾಗಿ ಸೆಕ್ಷನ್ -144 ಹಾಕಲು ತಾಲೂಕಾಡಳಿತ ಮುಂದಾಗಿತ್ತು. ಈ ಸಂಬಂಧ ಬಂಟ್ವಾಳ ಪೊಲೀಸ್ ಇನ್ಸ್ ಪೆಕ್ಟರ್ ಅನಂತಪ್ರಸಾದ್ ಅವರು ತಹಶೀಲ್ದಾರರಿಗೆ ಪತ್ರವನ್ನು ನೀಡಿದ್ದರು. ಪರಿಸ್ಥಿತಿ ಹತೋಟಿಗೆ ಬರುತ್ತಿದ್ದಂತೆ ಇದನ್ನು ಕೈಬಿಡಲಾಯಿತು

