ಕುಂದಾಪುರ : ಮಂಗಳಮುಖಿಯರನ್ನು ಸಮಾಜ ಸಮಾನತೆಯಿಂದ ಒಪ್ಪಿಕೊಂಡಾಗ ನಮ್ಮಲ್ಲಿಯೂ ಆತ್ಮವಿಶ್ವಾಸ ಬೆಳೆಯುತ್ತದೆ, ಇನ್ನೂ ಹೆಚ್ಚಿನ ಸಾಧನೆ ಮಾಡಲು ಅವಕಾಶ ದೊರೆಯುತ್ತದೆ. ತೃತೀಯ ಲಿಂಗಿಯಾದಾಗ ಕುಟುಂಬದ ಬೆಂಬಲ ಮತ್ತು ಸಹಕಾರ ಅಗತ್ಯ ಮತ್ತು ಸಮಾಜವು ಅವರನ್ನು ಸರ್ವ ಸಮನಾಗಿ ಕಾಣುವಂತಾದಾಗ ಮಾತ್ರ ತೃತೀಯ ಲಿಂಗಿಗಳ ಬದುಕು ಹಸನಾಗಲು ಸಾಧ್ಯ ಎಂದು ಉಡುಪಿ ಜಿಲ್ಲೆಯ ಮೊದಲ ಮಂಗಳ ಮುಖಿ ಶಿಕ್ಷಕಿ ಕ್ರಿಸ್ಟಿಕಾ ಹೇಳಿದರು.
ಅವರು ಇಲ್ಲಿನ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿ ಆಯೋಜಿಸಿದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಲಿಂಗತ್ವ ಅಲ್ಪಸಂಖ್ಯಾತರ ಬದುಕಿನ ಒಳ-ಹೊರಗು’ ಎಂಬ ವಿಷಯದ ಕುರಿತು ಮಾತನಾಡಿದರು.
ಈ ಸಂದರ್ಭ ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಡಾ| ಕೆ. ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಪ-ಪ್ರಾಂಶುಪಾಲರಾದ ಡಾ| ಚೇತನ್ ಶೆಟ್ಟಿ ಕೋವಾಡಿ, ಕಾಲೇಜಿನ ಆಡಳಿತ ನಿಕಾಯಕರು ಹಾಗೂ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಶ್ರೀ ರಕ್ಷಿತ್ ರಾವ್ ಗುಜ್ಜಾಡಿ, ಶ್ರೀಮತಿ ರೇಷ್ಮಾ ಶೆಟ್ಟಿ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಮಹಮದ್ ಶಫಾನ್ ಅಲಿ ಸ್ವಾಗತಿಸಿ, ಸಿಂಚನಾ ಅತಿಥಿಗಳನ್ನು ಪರಿಚಯಿಸಿ, ಶ್ರೇಯಾ ವಂದಿಸಿ, ಆದಿತ್ಯ ಪ್ರಾರ್ಥಿಸಿ, ಶಿಲ್ಪಾ ನಿರೂಪಿಸಿದರು.

