ಬೈಂದೂರು: ಬೈಂದೂರು ಪಟ್ಟಣ ಪಂಚಾಯತಿ ಅವೈಜ್ಞಾನಿಕತೆಯನ್ನು ಕೂಡಲೇ ರದ್ದುಪಡಿಸಬೇಕು ಎಂದು ಆಗ್ರಹಿಸಿ ಬೈಂದೂರು ಮಂಡಲ ಬಿಜೆಪಿ ವತಿಯಿಂದ ಶಾಸಕರಾದ ಗುರುರಾಜ್ ಗಂಟಿಹೊಳೆ ಅವರ ನೇತೃತ್ವದಲ್ಲಿ ಶನಿವಾರ ಬೃಹತ್ ಪ್ರತಿಭಟನೆ ನಡೆಸಿ ತಹಶಿಲ್ದಾರರ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.
ಉಪ್ಪುಂದ ಶಾಸಕರ ಕಚೇರಿಯಿಂದ ಹೊರಟ ಬೈಕ್ ಜಾಥವು ಬೈಂದೂರಿನ ಸೇನೇಶ್ವರ ದೇವಸ್ಥಾನದ ಪರಿಸರದಲ್ಲಿ ಸೇರಿ ಅಲ್ಲಿಂದ ಸಾವಿರಾರು ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು ರೈತರು ಒಟ್ಟಾಗಿ ಕಾಲ್ನಡಿಗೆ ಮೂಲಕ ತಾಲೂಕು ಕಚೇರಿಗೆ ಸಾಗಿ, ಅವೈಜ್ಞಾನಿಕ ಪಟ್ಟಣ ಪಂಚಾಯಿತಿಯ ವ್ಯವಸ್ಥೆಗಳ ಬಗ್ಗೆಘೋಷಣೆಯನ್ನು ಕೂಗಿ ಪಟ್ಟಣ ಪಂಚಾಯತಿ ಅವೈಜ್ಞಾನಿಕತೆಯನ್ನು ತಕ್ಷಣವೇ ಸರಿಪಡಿಸಬೇಕು ಎಂದು ಒತ್ತಾಯಿಸಿ ಮನವಿ ಸಲ್ಲಿಸಿದರು.
ಶಾಸಕರಾದ ಗುರುರಾಜ್ ಶೆಟ್ಟಿ ಗಂಟಿಹೊಳೆ ಅವರು ಮಾತನಾಡಿ, ಪಟ್ಟಣ ಪಂಚಾಯತಿ ಅವೈಜ್ಞಾನಿಕತೆ ರದ್ದುಪಡಿಸುವಂತೆ ಆಗ್ರಹಿಸಿ ಹಿಂದಿನಿಂತೂ ಒತ್ತಡ ಹೇರುತ್ತಲೇ ಬಂದಿದ್ದೇವೆ. ಪಟ್ಟಣ ಪಂಚಾಯತಿ ವ್ಯಾಪ್ತಿಯ ಗ್ರಾಮೀಣ ಭಾಗದ ರೈತರು ಸಹಿತ ಎಲ್ಲರಿಗೂ ಸಮಸ್ಯೆಯಾಗುತ್ತಿದೆ. ಹೀಗಾಗಿ ಅವೈಜ್ಞಾನಿಕತೆಯನ್ನು ಕೂಡಲೇ ರದ್ದು ಮಾಡಬೇಕು. ಇದರಲ್ಲಿ ಯಾವುದೇ ರಾಜಕೀಯ ಇಲ್ಲ. ಜನರ ಸಮಸ್ಯೆ, ರೈತರ ಸಮಸ್ಯೆ ಬಗೆಹರಿಯಬೇಕು ಎಂದರು.
ಮುಂದಿನ ದಿನಗಳಲ್ಲಿ ಕ್ಷೇತ್ರದ 94ಸಿ, ಕುಮ್ಕಿ ಹಾಗೂ ಬಗರ್ ಹುಕುಂ ಸಮಸ್ಯೆಯ ವಿರುದ್ಧವೂ ಇನ್ನಷ್ಟು ಹೋರಾಟ ನಡೆಸಲಿದ್ದೇವೆ. ಕಾನೂನಾತ್ಮಕವಾಗಿ ಯಾವ ರೀತಿಯ ಪರಿಹಾರ ಕಂಡುಕೊಳ್ಳಬೇಕು ಎಂಬುದರ ಬಗ್ಗೆಯೂ ಚರ್ಚೆ ನಡೆಸುತ್ತಿದ್ದೇವೆ ಎಂದರು .
ಮಂಡಲ ಅಧ್ಯಕ್ಷೆ ಅನಿತಾ ಆರ್.ಕೆ. ಮಾತನಾಡಿ ,* ಬಿಜೆಪಿ ಜನಪರ, ರೈತರ ಪರವಾಗಿ ಸದಾ ಇರುತ್ತದೆ. ಪಟ್ಟಣ ಪಂಚಾಯತಿ ಅವೈಜ್ಞಾನಿಕತೆ ರದ್ದತಿ ಸಂಬಂಧ ನಮ್ಮ ನಿಲುವು ಹೋರಾಟ ಮೂಲಕ ಪ್ರಕಟಿಸಿದ್ದೇವೆ. ಕಾಂಗ್ರೆಸ್ ನಿಲುವು ಏನು ಎಂದು ಪ್ರಶ್ನಿಸಿದರು.ತಾಲೂಕು ಆಡಳಿತ ಸೌಧದಲ್ಲಿ ಬೈಂದೂರು ತಹಶೀಲ್ದಾರ ಎಸ್.ರಾಮಚಂದ್ರಪ್ಪ ರವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.
ಸಂದರ್ಭದಲ್ಲಿ ಹಿರಿಯ ಕುಮ್ಮಿ ಹೋರಾಟಗಾರ ಎಮ್.ಪಿ ಸತ್ಯನಾರಾಯಣ ಭಟ್, ಜಿ.ಪಂ ಮಾಜಿ ಸದಸ್ಯ ಸುರೇಶ ಬಟ್ವಾಡಿ, ಪ್ರಮುಖರಾದ ಕೆ.ಶಿವರಾಜ ಪೂಜಾರಿ, ಗೋಪಾಲ ಪೂಜಾರಿ ವಸ್ತ್ರ, ಬೈಂದೂರು ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಗಜೇಂದ್ರ ಬೇಲೆಮನೆ, ಜೈಸನ್ ಮದ್ದೋಡಿ ಹಾಗೂ ಬಿಜೆಪಿ ಕಾರ್ಯಕರ್ತರು ಹಾಜರಿದ್ದರು. ರೈತಮೋರ್ಚದ ಪುಷ್ಪರಾಜ್ ಶೆಟ್ಟಿ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿಗಳಾದ ಕರಣ್ ಪೂಜಾರಿ ವಂದಿಸಿದರು.
ಇದೇ ವೇಳೆ ಪಟ್ಟಣ ಪಂಚಾಯತಿ ಅವ್ಯವಸ್ಥೆ ಸರಿಪಡಿಸುವಂತೆ ಆಗ್ರಹಿಸಿ ಕೆಲವು ದಿನಗಳಿಂದ ನಡೆಯುತ್ತಿರುವ ಪ್ರತಿಭಟನ ಸ್ಥಳಕ್ಕೆ ಶಾಸಕರಾದ ಗುರುರಾಜ್ ಶೆಟ್ಟಿ ಗಂಟಿಹೊಳೆ ಭೇಟಿ ನೀಡಿ, ಪಟ್ಟಣ ಪಂಚಾಯತಿ ಅವ್ಯವಸ್ಥೆ ಸರಿಪಡಿಸುವ ನಿಟ್ಟಿನಲ್ಲಿ ನಮ್ಮದು ರೈತರಿಗೆ ಮತ್ತುರೈತರ ಹೋರಾಟಕ್ಕೆ ಬೆಂಬಲವಿದೆ, ಕ್ಷೇತ್ರದ ಜನತೆಗೆ ಯಾವುದೇ ಸಮಸ್ಯೆ ಆಗಬಾರದು ಎಂದು ಹೇಳಿದರು.

