Home » ಅಂತರ್ ರಾಜ್ಯ ಮಟ್ಟದಲ್ಲಿ ಗಾಂಜಾ ಸಾಗಾಟ ಮತ್ತು ಮಾರಾಟ : ನಾಲ್ವರ ಬಂಧನ
 

ಅಂತರ್ ರಾಜ್ಯ ಮಟ್ಟದಲ್ಲಿ ಗಾಂಜಾ ಸಾಗಾಟ ಮತ್ತು ಮಾರಾಟ : ನಾಲ್ವರ ಬಂಧನ

by Kundapur Xpress
Spread the love

ಮಂಗಳೂರು: ಅಂತರ್ ರಾಜ್ಯ ಮಟ್ಟದಲ್ಲಿ ಗಾಂಜಾ ಸಾಗಾಟ ಮತ್ತು ಮಾರಾಟ ನಡೆಸುತ್ತಿದ್ದ ನಾಲ್ವರನ್ನು ಪಣಂಬೂರು ಪೊಲೀಸರು ಬಂಧಿಸಿ, 22 ಕೆ.ಜಿ 250 ಗ್ರಾಂ ತೂಕದ ಅಕ್ರಮ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.

ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ಜೋಕಟ್ಟೆ ಕ್ರಾಸ್ ರೈಲ್ವೇ ಬ್ರಿಡ್ಜ್ ಸಮೀಪ ಹೊರ ರಾಜ್ಯದಿಂದ ಗಾಂಜಾವನ್ನು ತರಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಉತ್ತರ ಉಪ ವಿಭಾಗದ ಎ.ಸಿ.ಪಿ ಅವರ ನೇತೃತ್ವದಲ್ಲಿ, ಪಣಂಬೂರು ಠಾಣೆಯ ಪಿ.ಎಸ್.ಐ ಹಾಗೂ ಸಿಬ್ಬಂದಿಗಳ ತಂಡ ದಾಳಿ ನಡೆಸಿತು.

ಬಂಧಿತರನ್ನು ಮಹಾರಾಷ್ಟ್ರದ ಕರಣ್ ಬಾಬು ರಾಮ್ ಜಾದವ್ (27), ಮಧ್ಯಪ್ರದೇಶದ ಸಮೀರ್ ಶಾ (19), ಹೆಜಮಾಡಿ ಕೋಡಿ ನಿವಾಸಿ ಎಂ. ಹೆಚ್. ಮಯ್ಯದಿ (48), ಮತ್ತು ಮಂಗಳೂರು ಕುದ್ರೋಳಿ ನಿವಾಸಿ ಇಬ್ರಾಹಿಂ ಕಲೀಲ್ (47) ಎಂದು ಗುರುತಿಸಲಾಗಿದೆ.

ಬಂಧಿತರ ವಶದಲ್ಲಿದ್ದ 22 ಕೆ.ಜಿ 250 ಗ್ರಾಂ ಗಾಂಜಾ (ಅಂದಾಜು ಮೌಲ್ಯ ರೂ. 11,12,500), 6 ಮೊಬೈಲ್ ಫೋನ್ಗಳು (ಅಂದಾಜು ಮೌಲ್ಯ ರೂ. 18,000) ಹಾಗೂ ಗಾಂಜಾ ಸಾಗಾಟಕ್ಕೆ ಬಳಸಿದ KA-20-HE-2915 ಮತ್ತು KA-19-HP-6021 ಸಂಖ್ಯೆಯ ಸ್ಕೂಟರ್ಗಳನ್ನು (ಅಂದಾಜು ಮೌಲ್ಯ ರೂ. 1,00,000) ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ.

ಪ್ರಾಥಮಿಕ ತನಿಖೆಯಲ್ಲಿ ಕರಣ್ ಜಾದವ್ ಮತ್ತು ಸಮೀರ್ ಶಾ ಅವರು ಮಹಾರಾಷ್ಟ್ರ ಹಾಗೂ ಮಧ್ಯಪ್ರದೇಶ ಮೂಲಗಳಿಂದ ಗಾಂಜಾವನ್ನು ಪಡೆದು ಉಡುಪಿ ಜಿಲ್ಲೆಯ ಹೆಜಮಾಡಿ ಕೋಡಿಯ ಎಂ.ಹೆಚ್. ಮಯ್ಯದಿ ಮತ್ತು ಮಂಗಳೂರಿನ ಇಬ್ರಾಹಿಂ ಕಲೀಲ್ ಅವರಿಗೆ ಪೂರೈಕೆ ಮಾಡುತ್ತಿದ್ದರೆಂದು ತಿಳಿದುಬಂದಿದೆ.

ಈ ಇಬ್ಬರು ಆರೋಪಿಗಳು ಉಡುಪಿ, ಮಲ್ಪೆ, ಕಾರ್ಕಳ, ಮುಲ್ಕಿ, ಸುರತ್ಕಲ್, ಪಣಂಬೂರು ಮತ್ತು ಮಂಗಳೂರು ನಗರ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಗಾಂಜಾವನ್ನು ಮಾರಾಟ ಮಾಡುತ್ತಿದ್ದುದಾಗಿ ಪೊಲೀಸರು ತಿಳಿಸಿದ್ದಾರೆ. ಇದಲ್ಲದೆ, ಈ ಹಿಂದೆ ಕೂಡ ಹಲವಾರು ಬಾರಿ ಗಾಂಜಾವನ್ನು ಅಕ್ರಮವಾಗಿ ತರಿಸಿ ಉಡುಪಿ ಜಿಲ್ಲೆ ಹಾಗೂ ಮಂಗಳೂರು ನಗರದಲ್ಲಿ ಮಾರಾಟ ಮಾಡಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.

ಸ್ವಾಧೀನಪಡಿಸಿಕೊಳ್ಳಲಾದ ಗಾಂಜಾ, ಮೊಬೈಲ್ ಹಾಗೂ ವಾಹನಗಳ ಒಟ್ಟು ಮೌಲ್ಯ ರೂ. 12,30,500 ಎಂದು ಅಂದಾಜಿಸಲಾಗಿದೆ. ಈ ಸಂಬಂಧ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಳ್ಳಲಾಗಿದೆ

 

Related Articles

error: Content is protected !!