ಕುಂದಾಪುರ : ಇಲ್ಲಿನ ಪ್ರತಿಷ್ಠಿತ ಸಂಸ್ಥೆ ಕಲಾಕ್ಷೇತ್ರ-ಕುಂದಾಪುರ ಟ್ರಸ್ಟ್ ಇವರ ವತಿಯಿಂದ ನಡೆಯುವ ಅತ್ಯಂತ ಜನಪ್ರಿಯ ಕಾರ್ಯಕ್ರಮ ಇನಿದನಿ ಜನವರಿ 12 ರಂದು ನಡೆಯಲಿದೆ. ಕರಾವಳಿ ಜಿಲ್ಲೆಯ ಅತೀ ದೊಡ್ಡ ಸಂಗೀತ ಕಾರ್ಯಕ್ರಮವೆಂಬ ಹೆಗ್ಗಳಿಕೆಗೆ ಪಾತ್ರವಾದ ಇನಿದನಿ ತನ್ನ ಗುಣಮಟ್ಟದ ಕಾರಣಕ್ಕಾಗಿ ವರ್ಷದಿಂದ ವರ್ಷಕ್ಕೆ ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಪ್ರೇಕ್ಷಕರನ್ನು ತನ್ನತ್ತ ಸೆಳೆದುಕೊಳ್ಳುತ್ತಿದೆ.
ಬಹು ನಿರೀಕ್ಷಿತ ಕಾರ್ಯಕ್ರಮದ ಆಹ್ವಾನ ಪತ್ರಿಕೆ ಬಿಡುಗಡೆ ಸಮಾರಂಭವು ಡಿಸೆಂಬರ್ 5 ರಂದು ಕಲಾಕ್ಷೇತ್ರ-ಕುಂದಾಪುರ ಟ್ರಸ್ಟ್ ಕಛೇರಿಯ ಪ್ರಕಾಶಾಂಗಣದಲ್ಲಿ ನಡೆಯಲಿದೆ. ಯಕ್ಷಗಾನ ಭಾಗವತರಾದ ಶ್ರೀ ರಾಘವೇಂದ್ರ ಮಯ್ಯ ಇವರು ಅದನ್ನು ನೆರವೇರಿಸಲಿದ್ದು, ಮುಂಬೈನ ಉದ್ಯಮಿ ಹಾಲಾಡಿ ಆದರ್ಶ ಶೆಟ್ಟಿಯವರು ಇನಿದನಿ ಹಿನ್ನೋಟದ ದೃಶ್ಯಾವಳಿಯನ್ನು ಬಿಡುಗಡೆಗೊಳಿಸಲಿದ್ದಾರೆ. ಹೆಚ್.ಎಮ್.ಎಮ್ ಶಾಲೆಯ ಪ್ರಾಂಶುಪಾಲರಾದ ಡಾ.ಚಿಂತನಾ ರಾಜೇಶ್ ಮತ್ತು ಖ್ಯಾತ ಕಾರ್ಟೂನಿಷ್ಟ್ ಸತೀಶ್ ಆಚಾರ್ಯ ಕುಂದಾಪುರ, ಇವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಕಲಾಸಕ್ತ ಬಂಧುಗಳು ಭಾಗಿಯಾಗಬೇಕೆಂದು ಸಂಸ್ಥೆಯ ಅಧ್ಯಕ್ಷ ಕಿಶೋರ್ ಕುಮಾರ್ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

