ಬೆಂಗಳೂರು : ಹಾಲಿನ ದರ ಏರಿಕೆ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷರ ಮಾರ್ಗದರ್ಶನ ಮತ್ತು ನೇತೃತ್ವದಲ್ಲಿ ರೈತರ, ಗ್ರಾಹಕರ ಪರವಾಗಿ ಮತ್ತು ಸರ್ಕಾರದ ಈ ನಿರ್ಣಯದ ವಿರುದ್ಧ ರಾಜ್ಯ ಬಿಜೆಪಿ ಹಾಲು ಪ್ರಕೋಷ್ಠವು ಉಗ್ರ ಹೋರಾಟ ಮಾಡಲಿದೆ. ಅಲ್ಲದೆ, ಗ್ರಾಹಕರಿಗೆ ಮತ್ತು ರೈತರಿಗೆ ನ್ಯಾಯ ಕೊಡಿಸುವ ಕೆಲಸ ಮಾಡುತ್ತದೆ ಎಂದು ಬಿಜೆಪಿ ಹಾಲು ಪ್ರಕೋಷ್ಠದ ರಾಜ್ಯ ಸಂಚಾಲಕ ಬೇಳೂರು ರಾಘವೇಂದ್ರ ಶೆಟ್ಟಿ ಅವರು ತಿಳಿಸಿದ್ದಾರೆ.
ರಾಜ್ಯದಲ್ಲಿ ಬೇರೆ ಸಂಸ್ಥೆಗಳ ಹಾಲು ಉತ್ಪಾದಕರಿಗೆ ಲಾಭ ಮಾಡಿ ಕೊಟ್ಟು ಕಿಕ್ ಬ್ಯಾಕ್ ತೆಗೆದುಕೊಂಡು ನಮ್ಮ ರಾಜ್ಯದ ಸಂಸ್ಥೆಯೇ ಕತ್ತು ಹಿಸುಕುತ್ತಿದೆ ಎಂದು ಅವರು ಅನುಮಾನ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಬೆಲೆ ಏರಿಕೆ ಭಾಗ್ಯ ನೀಡುತ್ತಿದ್ದು, ಅದು ದಿನದಿಂದ ದಿನಕ್ಕೆ ಜನರ ಜೇಬಿಗೆ ಬೆಂಕಿ ಇಡುತ್ತಿದೆ. ಬೆಳಗ್ಗೆ ಜನರು ಖರೀದಿಸುವ ಹಾಲಿನಿಂದ ಹಿಡಿದು ಆಲ್ಕೊಹಾಲ್ ವರೆಗೆ, ಜನನ ಪ್ರಮಾಣ ಪತ್ರದಿಂದ ಹಿಡಿದು ಮರಣ ಪ್ರಮಾಣ ಪತ್ರದ ವರೆಗೆ ಎಲ್ಲಾ ಬೆಲೆ ಏರಿಸಿ ಜನರ ಜೀವನ ಹೈರಾಣಾಗಿಸಿದೆ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

