ಬೈಂದೂರು: ತಾಲ್ಲೂಕಿನ ಗುಜ್ಜಾಡಿ ಗ್ರಾಮದಲ್ಲಿ ಅಕ್ರಮ ಕೆಂಪು ಮಣ್ಣಿನ ದಂಧೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಸ್ಥಳೀಯರು ಲಾರಿ ತಡೆಹಿಡಿದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಘಟನೆ ಹೆಬ್ಬಾರ್ ಬೈಲು ಪ್ರದೇಶದಲ್ಲಿ ನಡೆದಿದೆ.
ಗುಜ್ಜಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ತಮ್ಮಯ್ಯ ದೇವಾಡಿಗ್ ಸ್ಥಳಕ್ಕೆ ಆಗಮಿಸಿ, “ಈ ಕ್ಷಣದಿಂದಲೇ ಅಕ್ರಮ ಕೆಂಪು ಮಣ್ಣು ಸಾಗಣೆ ನಿಲ್ಲಿಸಬೇಕು. ಭವಿಷ್ಯದಲ್ಲಿ ಗುಜ್ಜಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಯಾವುದೇ ಅಕ್ರಮ ಮಣ್ಣು ದಂಧೆ ನಡೆಯಬಾರದು”. ರಸ್ತೆಗಳು ಹಾಳಾಗಿ ಹೋಗಿದ್ದು, ಗ್ರಾಮಸ್ಥರಿಗೆ ಸಮಸ್ಯೆ ಉಂಟಾಗುತ್ತಿದೆ ಎಂದು ಆಕ್ರೋಶ ಹೊರಹಾಕಿದರು.
ಇತ್ತೀಚಿಗೆ ಬೈಂದೂರು ಹಾಗೂ ಕುಂದಾಪುರ ತಾಲೂಕಿನ ಹಲವು ಕಡೆ ಅಕ್ರಮ ಕೆಂಪು ಮಣ್ಣು ದಂಧೆ ನಡೆಯುತ್ತಿರುವ ಬಗ್ಗೆ ಸಮಗ್ರ ವರದಿ ಆಗುತ್ತಿದ್ರೂ, ಸಂಬಂಧಪಟ್ಟ ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ತಕ್ಷಣ ಉಡುಪಿ ಜಿಲ್ಲಾಧಿಕಾರಿಗಳು ಕುಂದಾಪುರ ಹಾಗೂ ಬೈಂದೂರು ಕಡೆ ಗಮನ ಹರಿಸಬೇಕು ಎಂಬುದೇ ಸಾರ್ವಜನಿಕರ ಒತ್ತಾಯವಾಗಿದೆ.

