ಉಪ್ಪಿನಂಗಡಿ: ಗಾಂಧಿ ಪಾರ್ಕ್ ಬಳಿಯ ವಾಣಿಜ್ಯ ಸಂಕೀರ್ಣವೊಂದರಲ್ಲಿ ಕಾಡುತ್ಪತ್ತಿ ಮತ್ತು ಅಡಕೆ ವ್ಯಾಪಾರ ನಡೆಸುವ ಉದ್ಯಮಿ ವಸಂತ ಗೌಡ ಎಂಬುವರ ಅಂಗಡಿಯಲ್ಲಿ ಹಾಡಹಗಲೇ 5 ಲಕ್ಷ ರೂ. ಕಳವುಗೈಯಲಾಗಿದೆ.
ಅಂಗಡಿಯಲ್ಲಿ ಯಾರೂ ಇಲ್ಲದ ವೇಳೆ ಅಂಗಡಿಗೆ ನುಗ್ಗಿದ ಕಳ್ಳರು, ಅಂಗಡಿಯ ಡ್ರಾಯರ್ ನಲ್ಲಿ ಇಟ್ಟಿದ್ದ 5 ಲಕ್ಷ ರೂಪಾಯಿ ದೋಚಿದ್ದಾರೆ. ಮಧ್ಯಾಹ್ನದ ವೇಳೆ ಅಂಗಡಿ ಮಾಲೀಕ ಶಟರ್ ಹಾಕದೇ ಇಟ್ಟು ಶೌಚಾಲಯಕ್ಕೆ ಹೋಗಿದ್ದಾರೆ. ಬರುವಾಗ ಬೀಗ ಹಾಕಿದ್ದ ಡ್ರಾಯರ್ ಅನ್ನು ಮುರಿದು ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ.ಈ ಅಂಗಡಿಯ ಒಳಗೆ ಸಿಸಿ ಕ್ಯಾಮಾರ ಇದ್ದು, ಅದಕ್ಕೆ ರಿಚಾರ್ಜ್ ಮಾಡಿಲ್ಲವಂತೆ. ಹೊರಗಿನ ಸಿಸಿ ಕ್ಯಾಮಾರಾದ ಸ್ವಿಚ್ ಕೂಡ ಕಡಿತಗೊಂಡಿತ್ತು ಎನ್ನಲಾಗಿದೆ. ಇದೇ ವಾಣಿಜ್ಯ ಸಂಕೀರ್ಣದಲ್ಲಿ ಹತ್ತಕ್ಕೂ ಹೆಚ್ಚು ಕೊಠಡಿಗಳನ್ನು ಬಾಡಿಗೆಗೆ ಕೊಡಲಾಗಿದೆ. ಆದರೆ ಯಾರೂ ಸಹ ಸಿಸಿ ಕ್ಯಾಮಾರಾ ಕೂಡ ಅಳವಡಿಸಿಲ್ಲ. ಇದನ್ನೆಲ್ಲಾ ಅರಿತುಕೊಂಡೇ ಕಳ್ಳರು ಕೈಚಳಕ ತೋರಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

