Home » ವಿಶ್ವ ವಿನಾಯಕ ಸಿ.ಬಿ.ಎಸ್.ಇ ಸ್ಕೂಲ್ : ವಿದ್ಯಾರ್ಥಿ ಸಂಸತ್ತಿನ ಪದಗ್ರಹಣ
 

ವಿಶ್ವ ವಿನಾಯಕ ಸಿ.ಬಿ.ಎಸ್.ಇ ಸ್ಕೂಲ್ : ವಿದ್ಯಾರ್ಥಿ ಸಂಸತ್ತಿನ ಪದಗ್ರಹಣ

by Kundapur Xpress
Spread the love

ತೆಕ್ಕಟ್ಟೆ : ವಿಶ್ವ ವಿನಾಯಕ ಸಿ.ಬಿ.ಎಸ್.ಇ ಸ್ಕೂಲ್ ತೆಕ್ಕಟ್ಟೆಯಲ್ಲಿ ವಿದ್ಯಾರ್ಥಿ ಸಂಸತ್ತಿನ ರಚನೆಯನ್ನು ಮಾಡಿ ಪದಗ್ರಹಣ ಕಾರ್ಯಕ್ರಮವನ್ನು ಆಯೋಜಿಸಲಾಯಿತು ಮುಖ್ಯ ಅತಿಥಿಗಳಾಗಿ ಆಗಮಿಸಿದ ಕೋಟ ಪೊಲೀಸ್ ಠಾಣಾಧಿಕಾರಿ ರಾಘವೇಂದ್ರ ಸಿ. ರವರು ಕಾರ್ಯಕ್ರಮ ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಪದಗ್ರಹಣ ಮಾಡಿದರು.

ವಿದ್ಯಾರ್ಥಿ ನಾಯಕರನ್ನು ಅಭಿನಂದಿಸಿ ಉತ್ತಮ ನಾಯಕತ್ವವನ್ನು ನಡೆಸಲು ಶಿಸ್ತು ಪಾಲನೆ ಬಹುಮುಖ್ಯ ಅಂಶವೆಂದು ತಿಳಿಸಿದರು. ವಿದ್ಯಾರ್ಥಿ ಸಂಸತ್ತಿನ ಜವಾಬ್ದಾರಿಗಳು ಹಾಗೂ ಕಾರ್ಯ ವೈಖರಿಯ ಕುರಿತು ವಿವರಿಸಿ ಇತರರನ್ನು ಮುನ್ನಡೆಸಿ ಮುನ್ನಡೆಯುವುದೇ ನಿಜವಾದ ನಾಯಕತ್ವ ಎಂದು ತಿಳಿಸಿದರು

ಉತ್ತಮ ನಾಯಕನಲ್ಲಿ ಜೀವನ ಮೌಲ್ಯಗಳು, ಮಾನವೀಯ ಮೌಲ್ಯಗಳು ಹೊಂದಿದ್ದು ಇತರರನ್ನು ಅರಿತುಕೊಂಡು ಮುನ್ನಡೆಯುವ ಮನೋಭಾವನೆ ಇರಬೇಕೆಂದು ತಿಳಿಸಿದರು. ಪ್ರತೀಯೊಬ್ಬರಿಗೂ ಈ ದೇಶದ ಸಂವಿಧಾನ ಹಾಗೂ ಕಾನೂನಿನ ಅರಿವು ಮೂಡಿಸಬೇಕು ಎಂದ ಅವರು ವಿದ್ಯಾರ್ಥಿಗಳಿಗೆ ಮಕ್ಕಳ ಸುರಕ್ಷತಾ ಕಾನೂನುಗಳು ಹಾಗೂ ಸಹಾಯವಾಣಿಯ ಕುರಿತು ತಿಳಿಸಿ ಮಾದಕ ವ್ಯಸನ, ಲೈಂಗಿಕ ದೌರ್ಜನ್ಯ, ಸೈಬರ್ ವಂಚನೆಗಳ ಕುರಿತು ನಿದರ್ಶನಗಳೊಂದಿಗೆ ವಿದ್ಯಾರ್ಥಿಗಳಿಗೆ ಅರಿವನ್ನು ಮೂಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಾಲಾ ಮ್ಯಾನೇಜಿಂಗ್ ಡೈರೆಕ್ಟರ್ ಎಮ್. ಪ್ರಭಾಕರ ಶೆಟ್ಟಿಯವರು ಮಾತನಾಡಿ ನಾಯಕರಾದವರು ಇತರರಿಗೆ ಸ್ಪೂರ್ತಿದಾಯಕವಾಗಬೇಕು ಎಂದು ನುಡಿದರು ವಿದ್ಯಾರ್ಥಿಯ ಜೀವನದಲ್ಲಿ ಶಿಸ್ತನ್ನು ಕಲಿಯಲು ಮೊದಲು ಕುಟುಂಬ ನಂತರ ಶಾಲೆ ಹಾಗೂ ಸಮಾಜದ ಪಾತ್ರ ಬಹಳ ಮುಖ್ಯವಾಗಿದೆ ಎಂದರು

ಕಾರ್ಯಕ್ರಮದಲ್ಲಿ ಶಾಲಾ ಮ್ಯಾನೇಜಿಂಗ್ ಡೈರೆಕ್ಟರ್ ಎಮ್. ಪ್ರಭಾಕರ ಶೆಟ್ಟಿ, ಶಾಲಾ ಪ್ರಾಂಶುಪಾಲ ನಿತಿನ್ ಡಿ’ ಆಲ್ಮೆಡಾ, ಶಿಕ್ಷಕರು ವಿದ್ಯಾರ್ಥಿಗಳು ಹಾಗೂ ಶಾಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಶಾಲಾ ವಿದ್ಯಾರ್ಥಿನಾಯಕಿಯಾಗಿ ಹರ್ಷಿಣಿ ಹಾಗೂ ಉಪನಾಯಕಿಯಾಗಿ ಇಂಪನಾ ಆಯ್ಕೆಯಾದರು. ವಿದ್ಯಾರ್ಥಿಗಳಾದ ರಿಷಾ ಆರ್ ಆಚಾರ್ಯ ಸ್ವಾಗತಿಸಿದರು, ಫಾತಿಮಾ ಝಾಹರಾ ಕರ‍್ಯಕ್ರಮ ನಿರೂಪಿಸಿದರು, ಡಿ ಸಾನ್ವಿ ವಂದಿಸಿದರು, ಶಿಕ್ಷಕರಾದ ಸಂದೀಪ್, ರಜನಿ ನಾಗಾರಾಜ್ ಹಾಗೂ ರವೀಂದ್ರ ಕೆ. ರವರು ಕಾರ್ಯಕ್ರಮ ಸಂಘಟಿಸಿದರು.

 

Related Articles

error: Content is protected !!