ಕೋಟ : ಒಂದು ಊರಿಗೆ ದೇವಸ್ಥಾನ ಎಷ್ಟು ಮುಖ್ಯವೋ ಅಂತೆಯೇ ಕಲೆ ಮತ್ತು ಸಾಹಿತ್ಯದ ಕಂಪು ಅಷ್ಟೇ ಮುಖ್ಯ. ಯಾವ ಸಮಾಜ ಸಾಂಸ್ಕೃತಿಕವಾಗಿ ತಮ್ಮನ್ನು ತೊಡಗಿಸಿಕೊಳ್ಳುತ್ತದೋ ಆ ಸಮಾಜ ಸುಸಂಸ್ಕೃತವಾಗಿ ಬೆಳೆಯುತ್ತದೆ. ಎಂದು ಸಾಲಿಗ್ರಾಮ ಕಾರ್ಕಡದ ವೇದಮೂರ್ತಿ ರತ್ನಾಕರ ಸೋಮಯಾಜಿ ಅಭಿಪ್ರಾಯ ಪಟ್ಟರು.
ಅವರು ಪೂರ್ಣಚಂದ್ರ ಯಕ್ಷಕಲಾ ಪ್ರತಿಷ್ಠಾನ ಕೊಂಡದಕುಳಿ,ಕುಂಭಾಶಿ ಇವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಇವರ ಸಹಕಾರದಲ್ಲಿ ಸದಾನಂದ ರಂಗಮಂಟಪ ಸಾಲಿಗ್ರಾಮದ ಗುಂಡ್ಮಿಯಲ್ಲಿ ಹಮ್ಮಿಕೊಂಡ ಯಕ್ಷ ಉತ್ಸವಕ್ಕೆ ಜ್ಯೋತಿ ಬೆಳಗಿಸುವುದರೊಂದಿಗೆ ಚಾಲನೆ ನೀಡಿ ಮಾತನಾಡುತ್ತಿದ್ದರು.
ಯಕ್ಷಗಾನ ಕಲಾಕೇಂದ್ರದ ಕಾರ್ಯದರ್ಶಿ ಐರೋಡಿ ರಾಜಶೇಖರ ಹೆಬ್ಬಾರ, ಪೂರ್ಣಚಂದ್ರ ಯಕ್ಷಕಲಾ ಪ್ರತಿಷ್ಠಾನದ ಕಾರ್ಯದರ್ಶಿ ಕೊಂಡದಕುಳಿ ರಾಮಚಂದ್ರ ಹೆಗಡೆ, ಕನ್ನಡ ಸಾಹಿತ್ಯ ಪರಿಷತ್ತಿನ ಬ್ರಹ್ಮಾವರ ಘಟಕದ ಅಧ್ಯಕ್ಷರಾದ ರಾಮಚಂದ್ರ ಐತಾಳ, ಉಪಸ್ಥಿತರಿದ್ದರು. ರಾಮಚಂದ್ರ ಹೆಗಡೆ ಕೊಂಡದಕುಳಿಯವರು ಸ್ವಾಗತಿಸಿದರೆ, ಸೀತಾರಾಮ ಸೋಮಯಾಜಿಯವರು ವಂದಿಸಿದರು. ಸಭಾಕಾರ್ಯಕ್ರಮದ ನಂತರ ಅತಿಥಿ ಕಲಾವಿದರಿಂದ “ ಧರ್ಮಾಂಗದ ದಿಗ್ವಿಜಯ” ಎಂಬ ಯಕ್ಷಗಾನ ಪ್ರದರ್ಶನ ನಡೆಯಿತು.

