ಇಂದ್ರಿಯಗಳ ಅತ್ಯಂತ ಕೆಳಸ್ತರದಲ್ಲಿ ಬದುಕುವ ಮನುಷ್ಯನ ಜೀವನವು ಹೇಗಿರುವುದೆಂಬುದನ್ನು ಇಂದಿನ ಮಾರ್ಕೆಟಿಂಗ್ ಯುಗದಲ್ಲಿ ಎಲ್ಲರೂ ಬಲ್ಲರು. ದೇಹ ಸುಖವನ್ನು ಹೆಚ್ಚಿಸುವುದೊಂದೇ ಇಂದು ವಿಜ್ಞಾನ–ತಂತ್ರಜ್ಞಾನದ ವಾಣಿಜ್ಯೋದ್ದೇಶವಾಗಿದೆ. ಮನುಷ್ಯ ತನ್ನ ದೇಹ ಸುಖವನ್ನು, ಲೈಂಗಿಕ ಆನಂದವನ್ನು ಎಷ್ಟು ತೀವ್ರವಾಗಿ ಅನುಭವಿಸಲು ಸಾಧ್ಯವೋ ಅಷ್ಟೆಲ್ಲಾ ಸೌಕರ್ಯಗಳನ್ನು ಇಂದಿನ ವಿಜ್ಞಾನವು ಒದಗಿಸುತ್ತಿದೆ. ಎಲ್ಲ ಬಗೆಯ ಸುಖ-ಭೋಗಗಳನ್ನು ಪ್ರಕೃತಿಗೆ ವಿರುದ್ಧವಾಗಿ ಅನುಭವಿಸುವ ಹುನ್ನಾರವೇ ಇಂದು ಪ್ರಧಾನವಾಗಿರುವುದರಿಂದ ಮನುಷ್ಯನ ಬಾಳು ‘ವಿಕೃತಿ’ಗಳಿಂದ ತುಂಬಿಕೊಂಡಿದೆ. ವಿಜ್ಞಾನ–ತಂತ್ರಜ್ಞಾನದಿಂದ ಮನುಷ್ಯನ ಜೀವನವು ಅಪಾರ ಸುಖ–ಸೌಕರ್ಯಗಳನ್ನು ಅನುಭವಿಸುವಂತಾಗಿದೆಯಾದರೂ ಆತ್ಮನಲ್ಲಿ ಅತೃಪ್ತಿ, ಅಸಹನೆ, ದ್ವೇಷಾಸೂಯೆಗಳೇ ಮನೆಮಾಡಿಕೊಂಡಿವೆ. ದಿನಗಳೆದಂತೆ ಮನುಷ್ಯನಲ್ಲಿ ರಾಕ್ಷಸೀ ಪ್ರವೃತ್ತಿ ಹೆಚ್ಚುತ್ತಿದೆ. ಆತನಲ್ಲಿ ಹಿಂಸಾರತಿ ತೀವ್ರಗೊಳ್ಳುತ್ತಿದೆ. ಇದು ಯಾಕೆ ಹೀಗೆ? ಯಾವೆಲ್ಲ ವೈಜ್ಞಾನಿಕ ಅನ್ವೇಷಣೆಗಳಿಂದ ಮನುಷ್ಯನ ಬಾಳು ಹಸನಾಗಿ ಆತ ನಾಗರಿಕನೆನಿಸಿಕೊಂಡಾನೆಂದು ನಾವು ಭಾವಿಸಿದವೋ ಅವೆಲ್ಲವೂ ಆತನಿಗೆ, ಆತನ ಸಮಾಜಕ್ಕೆ ಮಾರಕಪ್ರಾಯವಾಗಿ ಪರಿಣಮಿಸಿವೆ. ಇರುವುದೊಂದೇ ಭೂಮಿಯನ್ನು ಅದೆಷ್ಟು ಸಲ ಬೇಕಿದ್ದರೂ ಪೂರ್ತಿಯಾಗಿ ಸುಟ್ಟು ನಿರ್ನಾಮ ಮಾಡುವ ರಾಕ್ಷಸೀ ಶಕ್ತಿ ಇಂದು ಮನುಷ್ಯನ ಕೈಯಲ್ಲಿದೆ. ಹೀಗಾಗಲು ಕಾರಣವೇನು? ಧರ್ಮವನ್ನು ಮರೆತು ವಿಜ್ಞಾನವು ಸಾಗುತ್ತಿರುವುದೇ ಇದಕ್ಕೆ ಕಾರಣ. ವಿಶ್ವವಿಖ್ಯಾತ ವಿಜ್ಞಾನಿ ಆಲ್ಭರ್ಟ್ ಐನ್ಸ್ಟೀನ್ ಪ್ರಕಾರ ಧರ್ಮವಿಲ್ಲದಿದ್ದರೆ ವಿಜ್ಞಾನವು ಹೆಳವನ ಹಾಗೆ; ವಿಜ್ಞಾನವಿಲ್ಲದಿದ್ದರೆ ಧರ್ಮವು ಕುರುಡನ ಹಾಗೆ!


