ನವದೆಹಲಿ : ಪೆಹಲ್ಗಾಮ್ ಉಗ್ರ ದಾಳಿಯ ಬೆನ್ನಲ್ಲೇ ಪಾಕಿಸ್ತಾನಿಯರಿಗೆ ನೀಡಿದ್ದ 14 ರೀತಿಯ ವೀಸಾ ರದ್ದುಪಡಿಸಿದ್ದ ಕೇಂದ್ರ ಸರ್ಕಾರ, ಏ.27ರ ಗಡುವಿನೊಳಗೆ ಪಾಕ್ ಪ್ರಜೆಗಳು ದೇಶ ಬಿಡುವುದನ್ನು ಖಚಿತಪಡಿಸಿ ಎಂದು ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ.
ಈ ಸಂಬಂಧ ಎಲ್ಲಾ ರಾಜ್ಯಗಳ ಮುಖ್ಯ ಮಂತ್ರಿಗಳಿಗೆ. ಶುಕ್ರವಾರ ಖುದ್ದಾಗಿ ಕರೆ ಮಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಗಡುವು ಮೀರಿ ಯಾವೊಬ್ಬ ಪಾಕಿಯೂ ಭಾರತದಲ್ಲಿ ಇರದಂತೆ ನೋಡಿಕೊಳ್ಳಿ. ಎಲ್ಲರ ನ್ನೂ ಆದಷ್ಟು ಬೇಗ ಹುಡುಕಿ ಹೊರಹಾಕಿ ಎಂದು ಸೂಚಿಸಿದ್ದಾರೆ.
ಈ ಮೂಲಕ ರಾಜ್ಯ ಸರ್ಕಾರಗಳನ್ನೂ ವಿಶ್ವಾಸಕ್ಕೆ ತೆಗೆದುಕೊಂಡು, ಆದೇಶ ಜಾರಿಯನ್ನು ಖಚಿತಪಡಿಸಲು ಮುಂದಾಗಿದ್ದಾರೆ. ಪಾಕಿಸ್ತಾನದ ವಿರುದ್ದದ ರಾಜತಾಂತ್ರಿಕ ಕ್ರಮದ ಭಾಗವಾಗಿ, ದೀರ್ಘಾವಧಿ ವೀಸಾ ಪಡೆದಿರುವ ಪಾಕಿಸ್ತಾನದ ಹಿಂದೂಗಳ ಹೊರತಾಗಿ ಪಾಕ್ ಪ್ರಜೆಗಳಿಗೆ ನೀಡಲಾಗಿದ್ದ ಸಾರ್ಕ್ ಸೇರಿ ಎಲ್ಲಾ ವೀಸಾಗಳನ್ನು ಏ.27ರಿಂದ ರದ್ದು ಮಾಡಲಾಗಿದೆ. ಜೊತೆಗೆ ದೇಶ ತೊರೆಯಲು 48 ಗಂಟೆಗಳ ಗಡುವನ್ನೂ ವಿಧಿಸಲಾಗಿದೆ. ಅದರ ಬೆನ್ನಲ್ಲೇ, ತಮ್ಮ ವ್ಯಾಪ್ತಿ ಪ್ರದೇಶದಲ್ಲಿ ಯಾವೊಬ್ಬ ಪಾಕ್ ಪ್ರಜೆಯೂ ಉಳಿಯದಂತೆ ನೋಡಿಕೊಳ್ಳಿ ಎಂದು ಸಿಎಂ ಗಳಿಗೆ ಅಮಿತ್ ಶಾ ಸೂಚನೆ ನೀಡಿದ್ದಾರೆ.

