ಮುಖ್ವಾ : ಪ್ರಧಾನಿ ನರೇಂದ್ರ ಮೋದಿ ಅವರು ಅರ್ಚಕರ ವೇದಘೋಷಗಳ ನಡುವೆ ಉತ್ತರಕಾಶಿ ಜಿಲ್ಲೆಯಲ್ಲಿನ ಗಂಗಾದೇವಿಯ ಚಳಿಗಾಲದ ಮುಖ್ವಾ ದೇವಾಲಯದಲ್ಲಿ ಗುರುವಾರ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಇದಕ್ಕೂ ಮುನ್ನ ಸ್ಥಳೀಯರು ಪಾರಂಪರಿಕ ಧಿರಿಸಿನೊಂದಿಗೆ ಪ್ರಧಾನಿಯವರನ್ನು ಸುತ್ತುವರಿದು ನೃತ್ಯಗಳೊಂದಿಗೆ ಆತ್ಮೀಯವಾಗಿ ಸ್ವಾಗತಿಸಿದರು. ಮೋದಿಯವರು ಕೂಡ ಕೈಮುಗಿದು ಜನತೆಯ ಪ್ರೀತಿಗೆ ಸ್ಪಂದಿಸಿದರು. ಮುಂಜಾನೆಯ ಮಂಜಿನಿಂದ ಆವೃತ್ತವಾದ ಸುತ್ತಲಿನ ಪರ್ವತ ಪ್ರದೇಶಗಳು ಮನಮೋಹಕವಾಗಿ ಗೋಚರಿಸುತ್ತಿದ್ದು ಪ್ರಧಾನಿಯವರು ಕೂಡ ವೀಕ್ಷಿಸಿ ಸಂತಸಪಟ್ಟರು.
ಮುಖ್ವಾ ಒಂದು ಹಳ್ಳಿಯಾಗಿದ್ದು ಗಂಗಾದೇವಿಗೆ ಸಮರ್ಪಿತವಾದ ಗಂಗೋತ್ರಿ ದೇವಾಲಯಕ್ಕೆ ಹೋಗುವ ದಾರಿಯಲ್ಲಿ ಇದೆ. ಪ್ರತಿವರ್ಷ ಚಳಿಗಾಲದ ಸಮಯದಲ್ಲಿ ಅದರ ಗೇಟುಗಳು ಮುಚ್ಚಲ್ಪಟ್ಟ ಬಳಿಕ ದೇವಿಯ ಪ್ರತಿಮೆಯನ್ನು ಗಂಗೋತ್ರಿ ಧಾಮ್ನಿಂದ ಮುಖ್ವಾ ದೇವಾಲಯಕ್ಕೆ ಸ್ಥಳಾಂತರಿಸಲಾಗುತ್ತದೆ. ಈ ಸಂದರ್ಭ ಪ್ರಧಾನಿಯವರು ಟ್ರೆಕ್ಕಿಂಗ್ ಮತ್ತು ಬೈಕ್ ರ್ಯಾಲಿಯೊಂದಕ್ಕೆ ಹಸಿರು ನಿಶಾನೆ ತೋರಿ ಚಾಲನೆಯಿತ್ತರಲ್ಲದೆ ಹರ್ಸಿಲ್ನಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.ಈ ಹಿಂದೆ ಪ್ರಥಮ ಬಾರಿಗೆ ಪ್ರಧಾನಿಯಾದ ಸಂದರ್ಭ ಮೋದಿಯವರು ಅಲ್ಲಿಗೆ ತಮ್ಮ ಮೊದಲ ಭೇಟಿ ನೀಡಿದ್ದರು

