ರಾಮೇಶ್ವರಂ : ರಾಮೇಶ್ವರಂ ದ್ವೀಪ ಮತ್ತು ಮುಖ್ಯ ಭೂಭಾಗದ ನಡುವೆ ರೈಲು ಸಂಪರ್ಕವನ್ನು ಒದಗಿಸುವ ಪಾಂಬನ್ ಸಮುದ್ರ ಸೇತುವೆಯನ್ನು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಉದ್ಘಾಟಿಸಿದರು ಮತ್ತು ಹೊಸ ರಾಮೇಶ್ವರಂ-ತಾಂಬರಂ ರೈಲು ಸೇವೆಗೆ ಹಸಿರು ನಿಶಾನೆ ತೋರಿದರು.
ಇದೇ ವೇಳೆ, ಸೇತುವೆಯ ಕೆಳಗೆ ಹಾದುಹೋದ ಕರಾವಳಿ ರಕ್ಷಣಾ ಪಡೆ ಹಡಗೊಂದಕ್ಕೂ ಪ್ರಧಾನಿ ಹಸಿರು ನಿಶಾನೆ ತೋರಿದರು. 2.08 ಕಿ.ಮೀ. ದೂರದ ಈ ಬ್ರಿಡ್ಜ್ ಇದು ಭಾರತದ ಮೊದಲ ವರ್ಟಿಕಲ್ ರೈಲ್ವೆ ಬ್ರಿಡ್ಜ್ ಆಗಿದೆ.
ಸಮುದ್ರ ಮಾರ್ಗದಲ್ಲಿ ಹಡಗುಗಳ ಸಂಚಾರ ವೇಳೆ ಸೇತುವೆಯು ಮೇಲಕ್ಕೆತ್ತಲ್ಪಟ್ಟು, ಬಳಿಕ ಅದು ಸ್ವಸ್ಥಾನಕ್ಕೆ ಮರಳಿ ರೈಲು ಸಂಚಾರಕ್ಕೆ ಅನುವು ಮಾಡಿಕೊಡುವ ವ್ಯವಸ್ಥೆ ಇದೆ. ಇದರಿಂದಾಗಿ 2022ರಿಂದ ಹಳೇ ಸೇತುವೆ ಶಿಥಿಲವಾಗಿದ್ದ ಕಾರಣ ರಾಮೇಶ್ವರಕ್ಕೆ ಸ್ಥಗಿತವಾಗಿದ್ದ ರೈಲು ಸಂಚಾರ ಪುನಾರಂಭ ಆದಂತಾಗಿದೆ. ಇದೇ ವೇಳೆ, 8300 ಕೋಟಿ ರು. ಮೌಲ್ಯದ ತಮಿಳುನಾಡಿನ ಇತರ ರೈಲು-ರಸ್ತೆ ಯೋಜನೆಗಳಿಗೂ ಮೋದಿ ಚಾಲನೆ ನೀಡಿದರು.
ತಂತ್ರ ಜ್ಞಾನಕ್ಕೆ ಮೋದಿ ಮೆಚ್ಚುಗೆ :
ಬಳಿಕ ಮಾತನಾಡಿದ ಮೋದಿ, ‘ಪಾಂಬನ್ ಸೇತುವೆ ತಂತ್ರಜ್ಞಾನ ಮತ್ತು ಸಂಪ್ರದಾಯವನ್ನು ಒಟ್ಟಿಗೆ ತರುತ್ತದೆ ಮತ್ತು ಪ್ರಯಾಣಿಕರು ಮತ್ತು ಯಾತ್ರಾರ್ಥಿಗಳಿಗೆ ಸಂಪರ್ಕವನ್ನು ಸುಗಮಗೊಳಿ ಸುತ್ತದೆ. ಇದು ಭಾರತದ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಮಹತ್ವದ ಮೈಲಿಗಲ್ಲು ಎಂದು ಹರ್ಷಿಸಿದರು.

