ಹೊಸದಿಲ್ಲಿ : ಆಪರೇಷನ್ ಸಿಂದೂರದಲ್ಲಿ ಗಡಿಗೆ ಸಮೀಪದ ಪಾಕ್ ಮಿಲಿಟರಿ ನೆಲೆಗಳನ್ನು ಪುಡಿಗಟ್ಟಿರುವ ಭಾರತೀಯ ಸೇನೆ, ಪಾಕ್ ಸೇನೆಯ ಮುಖ್ಯ ಕಚೇರಿಯಿರುವ ರಾವಲ್ಪಿಂಡಿಯಲ್ಲೂ ಪರಾಕ್ರಮ ಮೆರೆದಿದೆ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಪಹಲ್ಗಾಮ್ ಭಯೋತ್ಪಾದಕ ದಾಳಿ ಮುಖೇನ ಭಾರತದ ಹಲವು ಕುಟುಂಬಗಳ ಮಾತೆಯರ ಸಿಂಧೂರ ಅಳಿಸಿ ಹಾಕಿದ ಭಯೋತ್ಪಾದಕರು ಮತ್ತು ಭಾರತ ವಿರೋಧಿ ಶಕ್ತಿಗಳಿಗೆ ಭಾರತೀಯ ಮಿಲಿಟರಿ ಪಡೆ ತಕ್ಕ ದಂಡನೆ ನೀಡಿದೆ ಎಂದು ಶ್ಲಾಘಿಸಿದ್ದಾರೆ.
ಆಪರೇಷನ್ ಸಿಂದೂರ್ ಬರೇ ಮಿಲಿಟರಿ ಕಾರ್ಯಾಚರಣೆಯಲ್ಲ, ಬದಲಾಗಿ ಭಯೋತ್ಪಾದನೆ ವಿರುದ್ಧ ಭಾರತದ ರಾಜಕೀಯ, ಸಾಮಾಜಿಕ ವ್ಯೂಹಾತ್ಮಕ ಇಚ್ಛಾಶಕ್ತಿಯ ಪ್ರತೀಕವಾಗಿದೆ ಬ್ರಹ್ಮೋಸ್ ಉತ್ಪಾದನಾ ಘಟಕದ ಉದ್ಘಾಟನಾ ಕಾರ್ಯಕ್ರಮದಲ್ಲಿ ವರ್ಚ್ಚಲ್ ಆಗಿ ಮಾತನಾಡಿದರು.
ಭಯೋತ್ಪಾದನೆ ವಿರುದ್ಧ ಭಾರತದ ಬಲವಾದ ಇಚ್ಛಾಶಕ್ತಿಯ ಪ್ರತೀಕವಾಗಿದೆ ಸಿಂದೂರ್ ಆಪರೇಷನ್. ಜತೆಗೆ ನಮ್ಮ ಮಿಲಿಟರಿ ಶಕ್ತಿಯ ದೃಢ ಸಂಕಲ್ಪ, ಸಾಮರ್ಥ್ಯಗಳನ್ನೂ ಇದು ಪ್ರತಿಬಿಂಬಿಸಿದೆ. ಭಯೋತ್ಪಾದನೆ ವಿರುದ್ಧ ಭಾರತ ರಣರಂಗಕ್ಕಿಳಿದು ಯಾವುದೇ ಪ್ರತಿಕ್ರಮ ಕೈಗೊಂಡಲ್ಲಿ ಭಯೋತ್ಪಾದಕರು ಮತ್ತವರ ಮಾಸ್ಟರ್ಗಳಿಗೆ ಗಡಿಯಾಚೆಯ ಭೂಮಿ ಕೂಡ ಸುರಕ್ಷಿತವಲ್ಲ ಎಂಬುದನ್ನು ನಾವು ಸಾಧಿಸಿ ತೋರಿಸಿದ್ದೇವೆ ಎಂದರು

