ಉಡುಪಿ : ಗೀತೆ ಎಲ್ಲಾ ವೇದ ಉಪನಿಷತ್ತುಗಳಿಗೆ ಮೂಲ, ಗೀತೆಯ ಸಾರವೇ ಅದರಲ್ಲಿ ಎಸ್ತಾರಗೊಂಡಿದೆ. ಭಾರತೀಯರು ಜಾತಿ ಮತ ಭೇದವಿಲ್ಲದೇ ಭಾರತೀಯ ಗ್ರಂಥಗಳ ಸಾರ ಅರಿಯುವ ಜೊತೆಗೆ ಗೀತೆಯನ್ನು ತಿಳಿಯಬೇಕು ಎಂದು ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅಭಿಪ್ರಾಯ ವ್ಯಕ್ತಪಡಿಸಿದರು
ಪರ್ಯಾಯ ಶ್ರೀಕೃಷ್ಣ ಮಠದ ಆಶ್ರಯದಲ್ಲಿ ಶ್ರೀಕೃಷ್ಣಜನ್ಮಾಷ್ಟಮಿ ಅಂಗವಾಗಿ ಆ. 1ರಿಂದ ಆರಂಭಗೊಂಡ ಸಂಭ್ರಮದ ಶ್ರೀಕೃಷ್ಣ ಮಾಸೋತ್ಸವ ಭಾನುವಾರ ಸಮಾಪನಗೊಂಡಿದ್ದು, ಅಭ್ಯಾಗತರಾಗಿ ಆಗಮಿಸಿ ಅವರು ಮಾತನಾಡಿದರು.
ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥರು ತಮ್ಮ ಪರ್ಯಾಯದ ಎರಡು ವರ್ಷ ಅವಧಿಯಲ್ಲಿ ಗೀತೆಯ ಬಗ್ಗೆ ಜನಸಾಮಾನ್ಯರಿಗೆ ಅರಿವು ಮೂಡಿಸುತ್ತಿರುವುದು ಅಸಾಮಾನ್ಯ ಕಾರ್ಯ ಎಂದು ರಾಜ್ಯಪಾಲರು ಬಣ್ಣಿಸಿದರು
ವಿಶ್ವದಲ್ಲೇ ವಿಶಿಷ್ಟವಾಗಿರುವ ವೈವಿಧ್ಯಮಯ ಭಾರತೀಯ ಸಂಸ್ಕೃತಿಯಲ್ಲಿ ಬಹುದೇವ ಆರಾಧನೆ ಸಂಸ್ಕೃತಿ ರೂಢಿಯಲ್ಲಿದೆ. ಆದರೆ, ದೇವರ ನಾಮ ಹಲವಿದ್ದರೂ ದೇವನೊಬ್ಬನೇ. ಭಕ್ತಿಯಿಂದ ಸಮರ್ಪಿಸಿದ ಪೂಜೆ ಒಬ್ಬನೇ ದೇವನಿಗೆ ಸಲ್ಲುತ್ತದೆ. ಅನ್ಯಾನ್ಯ ಸಂಸ್ಕೃತಿಗಳಲ್ಲಿದ್ದರೂ ಭಾರತೀಯರು ನಂಬಿರುವ ಆತ್ಮವೇ ಭಾರತೀಯ” ಸಂಸ್ಕೃತಿಯ ಮೂಲ ಎಂದರು
ಮನುಷ್ಯನ ಗಳಿಕೆಯಲ್ಲಿ ಆತನ ಬುದ್ದಿಮತ್ತೆ, ಶ್ರಮ ಇತ್ಯಾದಿಗಳೊಂದಿಗೆ ಸಮಾಜದ ಕೊಡುಗೆಯನ್ನೂ ಮರೆಯಕೂಡದು. ಆದ್ದರಿಂದ ಸಮಾಜದ ಬಡವರು, ದುರ್ಬಲರು, ನಿರ್ಗತಿಕರಿಗೆ ನೆರವಾಗುವುದು ಅತ್ಯಂತ ಆವಶ್ಯಕ. ಅದನ್ನೇ ಗೀತೆಯಲ್ಲಿ ಶ್ರೀಕೃಷ್ಣ ಹೇಳಿದ್ದಾನೆ ಎಂದರು. ಸಾನ್ನಿಧ್ಯ ವಹಿಸಿದ್ದ ಕಿರಿಯ ಶ್ರೀ ಸುಶೀಂದ್ರತೀರ್ಥರು ನಾವು ಮಾಡುವ ಕರ್ಮಗಳನ್ನು ಭಗವದರ್ಪಣ ಭಾವದಿಂದ ಮಾಡಿದಲ್ಲಿ ಪಾಪ, ಪುಣ್ಯಗಳು ಬಾಧಿಸದು ಎಂದರು.
ಶಾಸಕರಾದ ಯಶ್ಪಾಲ್ ಸುವರ್ಣ ಮತ್ತು ಗುರ್ಮೆ ಸುರೇಶ ಶೆಟ್ಟಿ ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಮಾಹೆ ಸಹಕುಲಾಧಿಪತಿ ಡಾ. ಎಚ್ ಎಸ್ ಬಲ್ಲಾಳ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅತಿಥಿಗಳಾಗಿದ್ದರು.
ಈ ಸಂದರ್ಭದಲ್ಲಿಪಡುಬಿದ್ರಿತರಂಗಿಣಿ ಮಿತ್ರ ಮಂಡಳಿಯ ಹರೀಶ್ ರಾವ್ ಮತ್ತು ಪ್ರಭಾಕರ ಅಡಿಗ ಮಂಗಳೂರು ಅವರಿಗೆ ಶ್ರೀಕೃಷ್ಣ ಗೀತಾನುಗ್ರಹ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಮಠದ ದಿವಾನ ನಾಗರಾಜ ಆಚಾರ್ಯ ಮತ್ತು ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನಾಚಾರ್ಯ ಇದ್ದರು. ರಘತ್ತಮ ಆಚಾರ್ಯ ಸ್ವಾಗತಿಸಿ, ವಿದ್ವಾನ್ ಗೋಪಾಲಾಚಾರ್ ಕಾರ್ಯಕ್ರಮ ನಿರೂಪಿಸಿದರು

