ಉಡುಪಿ : ಕಲೌ ಸಂಕೀರ್ತನಪ್ರಾಯ್ಯಃ ಯಜಂತಿ ಸ್ಮ ಸುಮೇಧಸು ಎಂಬ ಭಾಗವತದ ಸಂದೇಶದಂತೆ ಕಲಿಯುಗದಲ್ಲಿ ಸಂಕೀರ್ತನ ಯಜ್ಞ ಬಹು ಮುಖ್ಯವಾಗಿದೆ ಎಂದು ಕೃಷ್ಣಮಠದ ಪರ್ಯಾಯ ಪೀಠಾಧೀಶ, ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಹೇಳಿದ್ದಾರೆ
ಮಂಗಳವಾರ ಗೀತಾ ಮಂದಿರದ ಮುಂಭಾಗದಲ್ಲಿ ತುಳಸಿ ಸಂಕೀರ್ತನೆ ಉದ್ಘಾಟಿಸಿ ಅವರು ಸಂದೇಶ ನೀಡಿದರು.ಸಂಕೀರ್ತನೆ ಅತಿ ಸುಲಭವಾಗಿ ಭಗವಂತನ ಪರಮಾನುಗ್ರಹ ಪಡೆಯಲು ಸುಲಭ ಮಾರ್ಗವಾಗಿದೆ. ಈ ಪವಿತ್ರ ಯಜ್ಞವು ಮಹತ್ವ ಪಡೆಯಲು ಶ್ರೀವಾದಿರಾಜ ಗುರು ಸಾರ್ವಭೌಮರು ಜನಸಾಮಾನ್ಯರಲ್ಲಿ ಸ್ಫೂರ್ತಿ ತುಂಬಿದರು. ಇದರ ಪ್ರಭಾವದಿಂದ ಸಂಕೀರ್ತನೆ ಇಂದು ಕರಾವಳಿಯ ಪ್ರದೇಶದಲ್ಲಿ ಮನೆಮನೆಗಳಲ್ಲಿ ವ್ಯಾಪಕವಾಗಿ ಕಂಗೊಳಿಸುತ್ತಿದೆ ಎಂದರು
ಪರ್ಯಾಯ ಶ್ರೀಗಳು, ಸಾರ್ವಜನಿಕರೂ ಈ ಸಂಕೀರ್ತನ ಯಜ್ಞದಲ್ಲಿ ಮುಕ್ತವಾಗಿ ಭಾಗವಹಿಸಲು ಅನುಕೂಲವಾಗಬೇಕೆಂಬ ಕಳಕಳಿಯಿಂದ ಈ ಸಂಕೀರ್ತನಾ ಯಜ್ಞವನ್ನು ಸಂಕಲ್ಪಿಸಿ ಗೀತಾಮಂದಿರದ ಮುಂಭಾಗದಲ್ಲಿ ಆಯೋಜಿಸಿದ್ದಾರೆ.
ಪುತ್ತಿಗೆ ಮಠದ ಕಿರಿಯ ಪಟ್ಟದ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು, ಮಠದ ಅಂತರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯರು ಉಪಸ್ಥಿತರಿದ್ದರು. ಶ್ರೀ ಪುತ್ತಿಗೆ ವಿದ್ಯಾಪೀಠದ ವಿದ್ಯಾರ್ಥಿಗಳಿಂದ ಸಂಕೀರ್ತನೆ ನಡೆಯಿತು.

