ಬೆಂಗಳೂರು: ರಾಮಚಂದ್ರಾಪುರ ಮಠದ ಪೀಠಾಧಿಪತಿ ರಾಘವೇಶ್ವರ ಭಾರತೀ ಸ್ವಾಮೀಜಿ ವಿರುದ್ಧದ ಅತ್ಯಾಚಾರ ಪ್ರಕರಣವನ್ನು ರದ್ದುಪಡಿಸಿ ಹೈಕೋರ್ಟ್ ಆದೇಶ ನೀಡಿದೆ.
ತಮ್ಮ ವಿರುದ್ಧದ ಪ್ರಕರಣ ರದ್ದು ಕೋರಿ ರಾಘವೇಶ್ವರ ಶ್ರೀಗಳು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು 2024ರ ಜೂನ್ 11 ರಂದು ವಿಚಾರಣೆ ನಡೆಸಿ ತೀರ್ಪು ಕಾಯ್ದಿರಿಸಿತ್ತು. ಆ ತೀರ್ಪನ್ನು ಶುಕ್ರವಾರ ಪ್ರಕಟಿಸಿದ ಪೀಠ ಪ್ರಕರಣ ರದ್ದುಗೊಳಿಸಿತು.
ಶ್ರೀರಾಮಚಂದ್ರಾಪುರ ಮಠ ಮತ್ತು ಬೆಂಗಳೂರಿನ ಗಿರಿನಗರದಲ್ಲಿ ತಮ್ಮ ಮೇಲೆ ರಾಘವೇಶ್ವರ ಭಾರತೀ ಸ್ವಾಮೀಜಿ ಅತ್ಯಾಚಾರ ಎಸಗಿದ್ದರು ಎಂದು 2015 ರ ಆ.28ರಂದು ಸಂತ್ರಸ್ತೆಯು ಬೆಂಗಳೂರಿನ ಗಿರಿನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನಲ್ಲಿ 2006ರಲ್ಲಿ ಮಠದಲ್ಲಿ 10ನೇ ತರಗತಿ ಓದುತ್ತಿರುವಾಗ ಚಾತುರ್ಮಾಸ ನಡೆಯುತ್ತಿದ್ದಾಗ ಮತ್ತು 2012ರ ಆಗಸ್ಟ್ ವೇಳೆ ಚಾತುರ್ಮಾಸ ನಡೆಯುತ್ತಿದ್ದಾಗ ಗಿರಿನಗರ ಮನೆಯ ಕೊಠಡಿಗೆ ಕರೆಸಿಕೊಂಡು ಸ್ವಾಮೀಜಿ ಅತ್ಯಾಚಾರ ಎಸಗಿದ್ದರು ಎಂದು ಆರೋಪಿಸಿದ್ದರು. ಇದರ ತನಿಖೆ ನಡೆಸಿದ್ದ ಸಿಐಡಿಯ ವಿಶೇಷ ತನಿಖಾ ದಳವು 2018ರ ಸೆ.18ರಂದು ವಿಚಾರಣಾಧೀನ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿತ್ತು.

