ಹೊಸಪೇಟೆ : ಬಡವರಿಗೆ ಆಸ್ತಿ ಹಕ್ಕು ನೀಡಬೇಕು ಎಂಬುದು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಕನಸಾಗಿತ್ತು. ಅದನ್ನು ಇದೀಗ ರಾಜ್ಯದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಈಡೇರಿಸಿದೆ. ಅದೇ ರೀತಿ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರು ‘ಉಳುವವನೇ ಭೂ ಒಡೆಯ’ ಎಂದು ಸಾರಿದಂತೆ, ಸಿದ್ದರಾಮಯ್ಯ ಸರ್ಕಾರ ವಾಸಿಸುವನೇ ಮನೆ ಒಡೆಯ ಎಂಬ ಯೋಜನೆ ಸಾಕಾರಗೊಳಿಸಿದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ರಾಜ್ಯದ ಕಾಂಗ್ರೆಸ್ ಸರ್ಕಾರವನ್ನು ಶ್ಲಾಘಿಸಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವಿನೊಂದಿಗೆ ರಾಜ್ಯದಲ್ಲಿ ಅಧಿಕಾ ರಕ್ಕೆ ಬಂದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ಮಂಗಳವಾರ ಎರಡು ವರ್ಷ ತುಂಬಿತು. ಇದರ ಸವಿನೆನಪಿಗಾಗಿ ಹೊಸಪೇಟೆಯ ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ಬೃಹತ್ ‘ಸಮರ್ಪಣೆ ಸಂಕಲ್ಪ ಸಮಾವೇಶ’ ಹಮ್ಮಿಕೊಳ್ಳಲಾಗಿತ್ತು. ಸಿರಿಧಾನ್ಯವನ್ನು ಮಡಕೆಯಲ್ಲಿ ಸುರಿಸುವ ಮೂಲಕ ರಾಹುಲ್ ಗಾಂಧಿಯವರು ಸಮಾವೇಶಕ್ಕೆ ವಿಧ್ಯುಕ್ತವಾಗಿ ಚಾಲನೆ ನೀಡಿದರು
ಬಳಿಕ ಮಾತನಾಡಿದ ಕಾಂಗ್ರೆಸ್ ವರಿಷ್ಠ ನಾಯಕ ರಾಹುಲ್ గాంధి. ‘ಪಂಚ ಗ್ಯಾರಂಟಿಯೊಂದಿಗೆ ಕಾಂಗ್ರೆಸ್ ಸರ್ಕಾರ ಇದೀಗ 6ನೇ ಗ್ಯಾರಂಟಿ ‘ಭೂ ಗ್ಯಾರಂಟಿ’ಯನ್ನೂ ಸಾಕಾರಗೊಳಿಸಿದೆ. ಆ ಮೂಲಕ ಸಿದ್ದರಾಮಯ್ಯ ಸರ್ಕಾರ ನುಡಿದಂತೆ ನಡೆದಿದೆ. ರಾಜ್ಯದ 2,000 ದಾಖಲೆ ರಹಿತ ಹಟ್ಟಿ, ಹಾಡಿ, ತಾಂಡಾ, ಮಜರೆಗಳ 1,11,111 ಫಲಾನುಭವಿಗಳಿಗೆ ಭೂ ದಾಖಲೆ ನೀಡಿದೆ. ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರು ‘ಉಳುವವನೇ ಭೂ ಒಡೆಯ’ ಎಂದು ಸಾರಿದಂತೆ, ಸಿದ್ದರಾಮಯ್ಯ ಸರ್ಕಾರ ‘ವಾಸಿಸುವನೇ ಮನೆ ಒಡೆಯ’ ಎಂಬ ಯೋಜನೆ ಸಾಕಾರಗೊಳಿಸಿದೆ. ಇದಕ್ಕೆ, ವಿಜಯನಗರ ನೆಲದ ಹೊಸಪೇಟೆಯ ಕ್ರೀಡಾಂಗಣದಲ್ಲಿ ಸೇರಿರುವ ಲಕ್ಷಾಂತರ ಜನಸ್ತೋಮವೇ ಸಾಕ್ಷಿ ಎಂದು ರಾಜ್ಯ ಸರ್ಕಾರವನ್ನು ಶ್ಲಾಘಿಸಿದರು

