111
ಬೆಂಗಳೂರು : ಪಹಲ್ಗಾಮ್ ದಾಳಿ ಬಳಿಕ ಪಾಕಿಸ್ತಾನಿಗಳನ್ನು ದೇಶದಿಂದ ಹೊರಹಾಕಲು ಕೇಂದ್ರ ಸರ್ಕಾರದ ಸೂಚನೆಯಂತೆ ಅಲ್ಪಾವಧಿ ವೀಸಾ, ವಿದ್ಯಾರ್ಥಿಗಳು, ಪ್ರವಾಸಿ ವೀಸಾದಡಿ ಬಂದು ನೆಲೆಸಿರುವವರ ಪತ್ತೆ ಹಚ್ಚಿ ಪಾಕ್ಗೆ ವಾಪಸ್ ಕಳುಹಿಸಲು ಕ್ರಮ ವಹಿಸಲಾಗುತ್ತಿದೆ ಎಂದು ಗೃಹ ಸಚಿವ ಡಾ| ಜಿ.ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ.
ಎಲ್ಲ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ವಿವಿಧ ಜಿಲ್ಲೆಗಳಲ್ಲಿ ನೆಲೆಸಿರುವ ಪಾಕಿಸ್ತಾನಿಗಳ ಅಂಕಿಅಂಶ ಸಂಗ್ರಹಿಸಲಾಗುತ್ತಿದೆ. ದೀರ್ಘಾವಧಿ ವೀಸಾ, ಇಲ್ಲಿನವರ ಮದುವೆ ಆಗಿರುವವರಿಗೆ ರಿಯಾಯಿತಿ ಇದೆ. ಇದರ ಹೊರತು ಉಳಿದವರನ್ನು ತಕ್ಷಣ ವಾಪಸ್ ಕಳುಹಿಸಲಾಗುವುದು ಎಂದು ತಿಳಿಸಿದರು. ರಾಜ್ಯ ಪೊಲೀಸರಿಗೆ ವಾರದ ರಜೆ ಮತ್ತು ಅದಕ್ಕೆ ಸರಿಯಾದ ವೇತನ ನೀಡದಿರುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ, ಈ ವಿಷಯ ಪರಿಶೀಲಿಸಲಾಗುವುದು. ತಕ್ಷಣವೇ ಪ್ರತಿಕ್ರಿಯಿಸಲು ಸಾಧ್ಯವಿಲ್ಲ ಇದಕ್ಕೆ ಸಾಕಷ್ಟು ಚರ್ಚೆಯಾಗಬೇಕು ಎಂದು ಹೇಳಿದರು.

