ಕೆಜಿಎಫ್ : ತ್ರೇತಾಯುಗದಲ್ಲಿ ಶ್ರವಣಕುಮಾರ ತನ್ನ ಅಂಧ ತಂದೆ-ತಾಯಿಯರನ್ನು ತಕ್ಕಡಿ ಯಲ್ಲಿ ಕೂರಿಸಿ, ಹೆಗಲಮೇಲೆ ಹೊತ್ತು ಕೊಂಡು ತೀರ್ಥಯಾತ್ರೆಗೆ ಹೊರಟ ಕಥೆ ಎಲ್ಲರಿಗೂ ಗೊತ್ತೇ ಇದೆ.

ಅದೇ ರೀತಿ ಮೈಸೂರಿನ ಕೃಷ್ಣ ಕುಮಾರ್’ಮಾತೃ ಸಂಕಲ್ಪ ಯಾತ್ರೆ ಕೈಗೊಂಡಿದ್ದು, ಸ್ಕೂಟರ್ನಲ್ಲಿ ತಮ್ಮ ತಾಯಿಗೆ 98,800 (ಸುಮಾರು 1 ಲಕ್ಷ ) ಕಿ.ಮೀ. ತೀರ್ಥಯಾತ್ರೆ ಮಾಡಿಸಿದ್ದಾರೆ. ತಾಯಂದಿರ ದಿನವಾದ ಭಾನುವಾರ ಅವರು ಕೆಜಿಎಫ್ಗೆ ಆಗಮಿಸಿದ್ದರು. ದೇಶ ಪರ್ಯಟನೆ ಮಾಡಬೇಕೆಂಬ 75 ವರ್ಷದ ತಮ್ಮ ತಾಯಿ ಚೂಡಾರತ್ನಾ ಅವರ ಬಯಕೆಯನ್ನು ಈಡೇರಿಸಲು ಕೃಷ್ಣಕುಮಾರ್ 2018ರ ಜನವರಿ 16ರಂದು ತಮ್ಮ ತೀರ್ಥ ಯಾತ್ರೆ ಪ್ರಾರಂಭಿಸಿದರು
ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಹಲವು ರಾಜ್ಯಗಳನ್ನು ಅವರು ಸ್ಕೂಟರ್ನಲ್ಲೇ ಸುತ್ತಿದ್ದಾರೆ. ತಮ್ಮ ತಾಯಿಗೆ ಆಂಧ್ರಪ್ರದೇಶ, ಕೇರಳ, ತಮಿಳುನಾಡು, ತೆಲಂಗಾಣ, ಮಹಾರಾಷ್ಟ್ರ, ಗೋವಾ, ಪಶ್ಚಿಮ ಬಂಗಾಳ, ಬಿಹಾರ, ಅಸ್ಸಾಂ, ಒಡಿಶಾ, ಮಿಜೋರಾಂ, ಮೇಘಾಲಯ, ತ್ರಿಪುರಾ, ಅರುಣಾಚಲ ಪ್ರದೇಶ ರಾಜ್ಯಗಳ ತೀರ್ಥಕ್ಷೇತ್ರಗಳ ದರ್ಶನ ಮಾಡಿಸಿದ್ದಾರೆ. ಅಲ್ಲದೆ, ನೇಪಾಳ, ಭೂತಾನ್, ಮ್ಯಾನ್ಮಾರ್ಗಳಿಗೂ ಸ್ಕೂಟರ್ ನಲ್ಲೇ ತೆರಳಿದ್ದಾರೆ. 2001ರಲ್ಲಿ ಕೃಷ್ಣಕುಮಾರ್ಗೆ ತಂದೆ ದಕ್ಷಿಣಾಮೂರ್ತಿ ಈ ಸ್ಕೂಟರ್ ಕೊಡಿಸಿದ್ದರು. 2015ರಲ್ಲಿ ದಕ್ಷಿಣಾಮೂರ್ತಿ ನಿಧನರಾದರು. ತಮ್ಮ ತಂದೆ ಕೊಟ್ಟ ಸ್ಕೂಟರ್ ನಲ್ಲೇ ಅವರು ತಾಯಿಗೆ ಯಾತ್ರೆ ಮಾಡಿಸುತ್ತಿದ್ದಾರೆ.

