ಹುಬ್ಬಳ್ಳಿ : ಸಿದ್ದರಾಮಯ್ಯ ಸರ್ಕಾರದಲ್ಲಿ ನಕ್ಸಲರು ಕಾಡುಬಿಟ್ಟು ನಾಡಿಗೆ ಬಂದಿದ್ದಾರೆ. ಅವರಿಗೆ ಕೆಂಪು ರತ್ನಗಂಬಳಿ ಹಾಸಿ ಸ್ವಾಗತಿಸುತ್ತಿದ್ದಾರೆ. ಧರ್ಮಸ್ಥಳ ವಿಚಾರವಾಗಿ ಮತಾಂಧರು, ನಗರ ನಕ್ಸಲರು ಹಾಗೂ ಟಿಪ್ಪು ಪ್ರೇರಿತ ಗ್ಯಾಂಗ್ಗೆ ಬೆಂಬಲ ನೀಡುತ್ತಿದ್ದಾರೆ. ಇದರಲ್ಲಿ ಅವರದೇ ನೇರವಾದ ಕೈವಾಡವಿದೆ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ ಗಂಭೀರ ಆರೋಪ ಮಾಡಿದರು.
ತಾಲೂಕಿನ ವರೂರಿನಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಸೌಜನ್ಯ ಪ್ರಕರಣದ ತನಿಖೆ ಬಗ್ಗೆ ನಮ್ಮ ಯಾರ ವಿರೋಧವೂ ಇಲ್ಲ. ಈಗಾಗಲೇ ಸಿಬಿಐ ತನಿಖೆ ಆಗಿದೆ. ಆದರೆ, ಕಮ್ಯುನಿಸ್ಟರು, ಮತಾಂಧರು ಸಿಟಿಯಲ್ಲಿದ್ದು, ಹಿಂದೂ ದೇವಸ್ಥಾನಗಳ ಅವಹೇಳನ ಮಾಡುವ ಕೆಲಸ ಮಾಡುತ್ತಿದ್ದಾರೆ. ಸಮೀರ್ ಎಂಬಾತ ಪಿ ಎಫ ಐ ಕಾರ್ಯಕರ್ತನಾಗಿದ್ದು, ಅ೦ ಥವರಿಂದ ಸಿಎಂ ಕಚೇರಿ ಸುತ್ತುವರಿದಿದೆ. ರಾಜ್ಯದಲ್ಲಿ ಪದೇ ಪದೇ ಹಿಂದೂ ಧರ್ಮಕ್ಕೆ ಅವಮಾನ ಮಾಡುವ ಕೆಲಸ ಆಗುತ್ತಿದೆ. ಜೆಸಿಬಿಯನ್ನು ಧರ್ಮಸ್ಥಳ ಹೆಬ್ಬಾಗಿಲಿಗೆ ನುಗ್ಗಿಸುತ್ತೇವೆ ಎನ್ನುತ್ತಿದ್ದಾರೆ. ರಾಜ್ಯದಲ್ಲಿ ಹಿಂದೂ ದೇವಾಲಯಗಳಿಗೆ ಅವಮಾನ ಮತ್ತು ಹಿಂದೂ ಕ್ಷೇತ್ರಗಳ ಅಪವಿತ್ರ ಮಾಡುವ ಕೆಲಸ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

