ಬೆಂಗಳೂರು : ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಸದ್ಯ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿರುವ ರನ್ಯಾ ರಾವ್ ಜೈಲಿನಿಂದಲೇ డిఆరా ఐ ಮಹಾ ಹೆಚ್ಚುವರಿ ನಿರ್ದೇಶಕರಿಗೆ ಸುದೀರ್ಘವಾದ ಮನವಿ ಪತ್ರ ಬರೆದು 7 ಅಂಶ ಗಳನ್ನು ಉಲ್ಲೇಖಿಸಿದ್ದಾರೆ. ಮತ್ತೊಂ ದೆಡೆ ವಿಮಾನ ನಿಲ್ದಾಣದಲ್ಲಿ ಶಿಷ್ಟಾಚಾರ ದುರ್ಬಳಕೆ ಆರೋಪಕ್ಕೆ ಸಂಬಂಧಿಸಿದಂತೆ ಪ್ರಕರಣದ ತನಿಖಾಧಿಕಾರಿಯಾಗಿರುವ ಗೌರವ್ ಗುಪ್ತ ಅವರು, ಶಿಷ್ಟಾಚಾರ ಸಿಬ್ಬಂದಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದ್ದಾರೆ.
ದುಬೈನಿಂದ ಬಂದಿಳಿದ ಕೂಡಲೇ ನನ್ನ ವಿರುದ್ಧ ಚಿನ್ನ ಕಳ್ಳ ಸಾಗಾಣಿಕೆ ಮಾಡಿರುವುದಾಗಿ ಸುಳ್ಳು ಆರೋಪಗಳನ್ನು ಹೊರಿಸುವ ಮೂಲಕ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ನಿಮ್ಮ ಅಧಿಕಾರಿಗಳು ನನಗೆ ವಿವರಣೆ ನೀಡಲು ಅವಕಾಶವನ್ನೇ ನೀಡಿರುವುದಿಲ್ಲ. ನಾನು ನಿರ್ದೋಷಿಯಾಗಿದ್ದು, ವಿಮಾನ ಬಂದಿಳಿಯುತ್ತಿದ್ದಂತೆ ಒಳಗೆಯೇ ನನ್ನನ್ನ ವಶಕ್ಕೆ ಪಡೆಯಲಾಗಿದೆ. ನಂತರ ನನ್ನನ್ನ ನ್ಯಾಯಾಧೀಶರ ಎದುರು ಹಾಜರುಪಡಿಸಲಾಗಿದೆ ಎಂದು ಉಲ್ಲೇಖಿಸಿದ್ದಾರೆ.
ಈ ಅವಧಿಯಲ್ಲಿ ಸರಿಸುಮಾರು 10 ರಿಂದ 15 ಬಾರಿ ನನಗೆ ಕಪಾಳಕ್ಕೆ ಹೊಡೆದು, ಹಲ್ಲೆ ಮಾಡಿದ್ದಾರೆ. ಅಧಿಕಾರಿಗಳು ಸಿದ್ಧಪಡಿಸಿದ ದಾಖಲೆ ಮೇಲೆ ಸಹಿ ಮಾಡಲು ನಿರಾಕರಿಸಿದ್ದಕ್ಕಾಗಿ ನನ್ನ ಮೇಲೆ ಹಲ್ಲೆ ಮಾಡಲಾಗಿದೆ. ಅಲ್ಲದೇ, ಒಬ್ಬ ಅಧಿಕಾರಿಯು, ನೀನು ಸಹಿ ಮಾಡದಿದ್ದರೆ ಪ್ರಕರಣದಲ್ಲಿ ನಿನ್ನ ತಂದೆಯ ಪಾತ್ರವಿಲ್ಲದಿದ್ದರೂ ಅವರ ಹೆಸರನ್ನು ಬಹಿರಂಗಗೊಳಿಸಬೇಕಾಗುತ್ತದೆ ಎಂದು ಒತ್ತಡ ಹೇರಿದ್ದಾರೆ.
ನಿರಂತರ ಒತ್ತಡ ಹಾಗೂ ಹಲ್ಲೆಯಿಂದಾಗಿ ನಾನು ಅಧಿಕಾರಿಗಳು ಹೇಳಿದಂತೆ 50 ರಿಂದ 60 ಕಡೆಗಳಲ್ಲಿ ಸಹಿ ಮಾಡಬೇಕಾಗಿದ್ದು, ನನ್ನ ಮೇಲೆ ಹಲ್ಲೆಗೈದಿರುವ ಅಧಿಕಾರಿಯನ್ನು ನಾನು ಗುರುತಿಸಬಲ್ಲೆ ಎಂದಿದ್ದಾರೆ. ಮಾ.3ರ ಸಂಜೆ 6.45ಕ್ಕೆ ವಶಕ್ಕೆ ಪಡೆದು ಮಾ. 4ರ ರಾತ್ರಿ 7.30ಕ್ಕೆ ನ್ಯಾಯಾಧೀಶರ ಎದುರಿಗೆ ಹಾಜರುಪಡಿಸಲಾಗಿದೆ. ಈ ಅವಧಿಯೊಳಗೆ ನನಗೆ ಸೂಕ್ತವಾದ ಆಹಾರ ವಿಲ್ಲದೇ ಮತ್ತು ನಿದ್ರೆ ಮಾಡಲು ಅವಕಾಶ ನೀಡದೇ ಹಿಂಸೆ ನೀಡಲಾಗಿದೆ ಎಂದು ಪತ್ರದಲ್ಲಿ ಬರೆದಿದ್ದಾರೆ.

