ಹೊಸದಿಲ್ಲಿ : ಸರ್ಕಾರಿ ಕಾಮಗಾರಿಗಳ ಗುತ್ತಿಗೆಗಳಲ್ಲಿ ಶೇ.4ರಷ್ಟನ್ನು ಮುಸಲ್ಮಾನರಿಗೆ ಮೀಸಲಿಡುವ ಕರ್ನಾಟಕ ಸರ್ಕಾರದ ತೀರ್ಮಾನ ತೀರಾ ಅಸಾಂವಿಧಾನಿಕ ಕಾಂಗ್ರೆಸ್ನ ತುಷ್ಠೀಕರಣ ರಾಜನೀತಿಯ ಭಾಗವಾಗಿರುವ ಈ ನಡೆಯು ರಾಷ್ಟ್ರೀಯ ಏಕತೆಯನ್ನು ದುರ್ಬಲಗೊಳಿಸಲಿದೆ ಎಂದು ಬಿಜೆಪಿ ಆರೋಪಿಸಿದೆ. ವಿಪಕ್ಷಗಳ ಪೈಕಿ ಕಾಂಗ್ರೆಸ್ನ್ನು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಪೈಪೋಟಿಯ ವೋಟ್ ಬ್ಯಾಂಕ್ ರಾಜನೀತಿಯತ್ತ ಒಯ್ಯಲು ಶ್ರಮಿಸುತ್ತಿದ್ದಾರೆ ಎಂದು ಬಿಜೆಪಿ ನಾಯಕ, ಕೇಂದ್ರ ಮಾಜಿ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಮುಸಲ್ಮಾನ ಗುತ್ತಿಗೆದಾರರಿಗೆ ಪ್ರತ್ಯೇಕ ಕೋಟಾ ನೀಡುವ ಕರ್ನಾಟಕ ಸರಕಾರದ ನಿರ್ಧಾರ ಹಿಂದೆ ರಾಹುಲ್ ಗಾಂಧಿ ಇದ್ದಾರೆ. ಯಾಕೆಂದರೆ ಇಂತಹ ನಿರ್ಧಾರ ಕೈಗೊಳ್ಳುವ ಧೈರ್ಯ ಅಥವಾ ರಾಜಕೀಯ ಬಂಡವಾಳ ಸಿಎಂ ಸಿದ್ದರಾಮಯ್ಯರಿಗೆ ಇಲ್ಲ ಎಂದು ರವಿಶಂಕರ್ ಪ್ರಸಾದ್ ಆರೋಪಿಸಿದರು.
ಮುಸಲ್ಮಾನರಿಗೆ ಸರಕಾರಿ ಗುತ್ತಿಗೆಗಳಲ್ಲಿ ಪ್ರತ್ಯೇಕ ಕೋಟಾದ ಘೋಷಣೆಯಿಂದ ಕೋಮುವಾದ ಮತ್ತು ವೋಟ್ ಬ್ಯಾಂಕ್ ರಾಜನೀತಿಗೆ ಹೊಸ ಆಯಾಮ ದೊರೆತಂತಾಗಿದೆ. ಮೇಲ್ನೋಟಕ್ಕೆ ಈ ನಿರ್ಧಾರ ಸಣ್ಣದೆಂದು ಕಾಣಬಹುದು. ಆದರೆ ಇಂತಹ ನಿರ್ಧಾರಗಳು ಗಂಭೀರ ಸ್ವರೂಪದ ರಾಷ್ಟ್ರೀಯ ತೊಡಕುಗಳಿಗೆ ಹೇತುವಾಗುವುದು ಎಂದು ಎಚ್ಚರಿಸಿದರು

