ಉಡುಪಿ : ಮಣಿಪಾಲ ಪೊಲೀಸ್ ಠಾಣೆ ವ್ಯಾಪ್ತಿಯ ಬಡಗಬೆಟ್ಟು ಗ್ರಾಮದ ರಾಜೀವನಗರದಲ್ಲಿ ಆಂಧ್ರಪ್ರದೇಶ ಮೂಲದ ಯುವಕ ಗಾಂಜಾ ಮಾರಾಟ ಮಾಡುತ್ತಿದ್ದು ಪೊಲೀಸರು ಬಂಧಿಸಿದ್ದಾರೆ. ಬಂದ ಖಚಿತ ಮಾಹಿತಿಯ ಆಧಾರದ ಮೇಲೆ ಮಣಿಪಾಲ ಪೊಲೀಸ್ ಉಪನಿರೀಕ್ಷಕಿ ಅಕ್ಷಯಕುಮಾರಿ ಎಸ್.ಎನ್. ಅವರ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿ ಸೀತಾರಾಮ ರೆಡ್ಡಿ ತೌಟರೆಡ್ಡಿ (21) ಎಂಬ ವ್ಯಕ್ತಿಯನ್ನು ಬಂಧಿಸಿದರು
ಆರೋಪಿ ಮೇಘಾಲಯದಿಂದ ಆನ್ಲೈನ್ ಆಪ್ (ರೆಡಿಟ್) ಮುಖಾಂತರ ಗಾಂಜಾ ಖರೀದಿ ಮಾಡಿ ಅಂಚೆ ಮೂಲಕ ಉಡುಪಿ ಮತ್ತು ಮಣಿಪಾಲ ಪ್ರದೇಶಗಳಿಗೆ ತರಿಸಿಕೊಂಡು ವಿದ್ಯಾರ್ಥಿಗಳು ಹಾಗೂ ಪರಿಚಯಸ್ತರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದನೆಂದು ತನಿಖೆಯಲ್ಲಿ ಬಹಿರಂಗವಾಗಿದೆ. ಆರೋಪಿಯ ಮನೆಯಿಂದ ಡೈಪರ್ಗಳ ಮಧ್ಯದಲ್ಲಿ ಮರೆಮಾಡಿದ್ದ ಮೂರು ಪ್ಯಾಕ್ಗಳಲ್ಲಿ ಸುಮಾರು ಒಂದು ಕೆಜಿಗೂ ಹೆಚ್ಚು ಗಾಂಜಾ ಪತ್ತೆಯಾಗಿದೆ.
ಪೊಲೀಸರು ಆರೋಪಿಯ ವಶದಿಂದ ಗಾಂಜಾ, ಎರಡು ಬಾಂಗ್ಗಳು, ಒಂದು ಐಫೋನ್, ನಗದು ರೂ. 3,180/- ಸೇರಿ ಒಟ್ಟು ಸುಮಾರು ರೂ. 1,35,000/- ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಕುರಿತು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಅಪರಾಧ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ

