Home » ನಕಲಿ ಬಂಗಾರ ವಂಚನೆ ಪ್ರಕರಣ : ಆರೋಪಿ ಬಂಧನ
 

ನಕಲಿ ಬಂಗಾರ ವಂಚನೆ ಪ್ರಕರಣ : ಆರೋಪಿ ಬಂಧನ

by Kundapur Xpress
Spread the love

ಉಡುಪಿ: ಕಾಪು ತಾಲೂಕಿನ ಪಡುಬಿದ್ರಿ ಹಳೆ ಅಂಚೆ ಕಚೇರಿ ಬಳಿ ನಡೆದ ನಕಲಿ ಬಂಗಾರ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಬಸ್ಸಮ್ಮ ಎಂಬ ಮಹಿಳೆ ನಡೆದುಕೊಂಡು ಹೋಗುತ್ತಿದ್ದಾಗ ಅಪರಿಚಿತ ಮಹಿಳೆ ಹಾಗೂ ಗಂಡಸು ಪರಿಚಯ ಮಾಡಿಕೊಂಡು, ಚಿನ್ನದಂತೆ ತೋರುವ ಸರವನ್ನು ತೋರಿಸಿ “ಇದು 6 ಪವನು ಚಿನ್ನದ ಸರ, ತುರ್ತು ಹಣದ ಅವಶ್ಯಕತೆ ಇದೆ” ಎಂದು ನಂಬಿಸಿದ್ದಾರೆ. ಈ ವೇಳೆ ಬಸ್ಸಮ್ಮ ರವರಿಂದ ಸುಮಾರು 2 ಪವನು ತೂಕದ, ಅಂದಾಜು ₹1.50 ಲಕ್ಷ ಮೌಲ್ಯದ ಬಂಗಾರದ ಒಡವೆಗಳು ಹಾಗೂ ₹6,000 ನಗದು ಪಡೆದು ಪರಾರಿಯಾಗಿದ್ದಾರೆ.
ನಂತರ ಬಸ್ಸಮ್ಮ ಅವರು ಸರವನ್ನು ಪರಿಶೀಲಿಸಲು ಹತ್ತಿರದ ಚಿನ್ನದ ಅಂಗಡಿಗೆ ಹೋದಾಗ ಅದು ನಕಲಿ ಎಂಬುದು ತಿಳಿದು ಬಂದಿದೆ. ಬಳಿಕ ಹಿಂದಿರುಗಿ ನೋಡಿದಾಗ ಆರೋಪಿಗಳು ಪರಾರಿಯಾಗಿದ್ದು, ಈ ಕುರಿತು ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತನಿಖೆಯ ವೇಳೆ ತುಮಕೂರು ಜಿಲ್ಲೆಯ ಬೆಳ್ಳಾವಿ ಹೋಬಳಿ ಬಲ್ಲಾಪುರ ಬುಡುಗನಹಳ್ಳಿ ನಿವಾಸಿ ಕಾವ್ಯ ಮತ್ತು ದಾವಣಗೆರೆ ಜಿಲ್ಲೆಯ ಸಂತೆಬೆನ್ನೂರು ತಾಲೂಕಿನ ವೆಂಕಟೇಶ್ ಆರೋಪಿಗಳೆಂದು ಪತ್ತೆಯಾಗಿದೆ. ಆರೋಪಿ ಕಾವ್ಯಳನ್ನು ಬಂಧಿಸಲಾಗಿದ್ದು, ಆಕೆಯಿಂದ ₹75,000 ಮೌಲ್ಯದ 7.610 ಗ್ರಾಂ ಚಿನ್ನಾಭರಣ ಹಾಗೂ ₹6,000 ನಗದು ವಶಪಡಿಸಿಕೊಳ್ಳಲಾಗಿದೆ.
ಪೊಲೀಸರು ಮತ್ತೊಬ್ಬ ಆರೋಪಿ ವೆಂಕಟೇಶ್ ಬಂಧನಕ್ಕಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.

 

Related Articles

error: Content is protected !!