ಉಡುಪಿ : ನಗರದ ಬಸ್ ನಿಲ್ದಾಣಗಳಲ್ಲಿ ಬಸ್ ಟೈಮಿಂಗ್ಸ್ ವಿಚಾರವಾಗಿ ಎರಡು ಪ್ರತ್ಯೇಕ ಹಲ್ಲೆ ಪ್ರಕರಣಗಳು ನಡೆದಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜನವರಿ 23ರಂದು ಬೆಳಿಗ್ಗೆ ನಗರದ ಸಿಟಿ ಬಸ್ ನಿಲ್ದಾಣದಲ್ಲಿ ಬಸ್ ಟೈಮಿಂಗ್ಸ್ ವಿಚಾರವಾಗಿ ಚಾಲಕರು ಮತ್ತು ನಿರ್ವಾಹಕರ ನಡುವೆ ಗಲಾಟೆ ನಡೆದಿದೆ. ‘ಸೀಮಾ’ ಬಸ್ನ ಚಾಲಕ ವಿಖ್ಯಾತ್ ಮತ್ತು ನಿರ್ವಾಹಕ ಶರಣ್ ಹಾಗೂ ‘ತನ್ವೀರ್’ ಬಸ್ನ ನಿರ್ವಾಹಕ ಹೇಮಂತ್ ಎಂಬುವವರು ಸಾರ್ವಜನಿಕ ಸ್ಥಳದಲ್ಲಿ ಅವಾಚ್ಯ ಶಬ್ದಗಳಿಂದ ಬೈದಾಡಿಕೊಂಡು, ಪರಸ್ಪರ ಹಲ್ಲೆ ನಡೆಸುವ ಮೂಲಕ ಜನರಲ್ಲಿ ಭಯದ ವಾತಾವರಣ ನಿರ್ಮಿಸಿದ್ದರು.
ಈ ಹಿನ್ನೆಲೆಯಲ್ಲಿ ಉಡುಪಿ ನಗರ ಪೊಲೀಸರು ಮೂವರನ್ನೂ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅದೇ ದಿನ ಸಂಜೆ 5 ಗಂಟೆಯ ಸುಮಾರಿಗೆ ಸರ್ವಿಸ್ ಬಸ್ ನಿಲ್ದಾಣದಲ್ಲಿ ಮತ್ತೊಂದು ಭೀಕರ ಘಟನೆ ಸಂಭವಿಸಿದೆ. ‘ಸೆಲೀನ’ ಬಸ್ ಚಾಲಕ ಸದ್ದಾಂ ಹಾಗೂ ‘ನವದುರ್ಗಾ’ ಬಸ್ ಚಾಲಕ ರಿಯಾಝ್ ನಡುವೆ ಟೈಮಿಂಗ್ಸ್ ವಿಚಾರವಾಗಿ ಶುರುವಾದ ಮಾತಿನ ಚಕಮಕಿ ವಿಕೋಪಕ್ಕೆ ಹೋಗಿದೆ. ಈ ವೇಳೆ ಸದ್ದಾಂ ಎಂಬಾತ ಸ್ಕ್ರೂ ಡ್ರೈವರ್ನಿಂದ ರಿಯಾಝ್ ಅವರ ಎಡಕಣ್ಣಿನ ಮೇಲ್ಭಾಗಕ್ಕೆ ಚುಚ್ಚಿ ಹಲ್ಲೆ ನಡೆಸಿದ್ದಾನೆ. ರಿಯಾಝ್ ಅಲ್ಲಿಂದ ತಪ್ಪಿಸಿಕೊಂಡು ಓಡಿದರೂ ಬೆನ್ನಟ್ಟಿದ ಸದ್ದಾಂ, ಕೊಲ್ಲುವ ಉದ್ದೇಶದಿಂದ ಮತ್ತೆ ಸ್ಕ್ರೂ ಡ್ರೈವರ್ನಿಂದ ಚುಚ್ಚಿ ಜೀವಬೆದರಿಕೆ ಹಾಕಿದ್ದಾನೆ ಎಂದು ದೂರಲಾಗಿದೆ.
ಸದ್ಯ ತೀವ್ರ ಗಾಯಗೊಂಡಿರುವ ರಿಯಾಝ್ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ನಗರ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿದೆ.

