ಉಡುಪಿ: ಗಣೇಶ ಚತುರ್ಥಿ ಆಚರಣೆ ಮತ್ತು ವಿಗ್ರಹ ವಿಸರ್ಜನೆ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಕಾನೂನು ಸುವ್ಯವಸ್ಥೆ ಹಾಗೂ ಸಾರ್ವಜನಿಕ ಶಾಂತಿಯನ್ನು ಕಾಪಾಡುವ ನಿಟ್ಟಿನಲ್ಲಿ ವಿವಿಧ ದಿನಾಂಕಗಳಂದು ಮದ್ಯ ಮಾರಾಟವನ್ನು ನಿಷೇಧಿಸಿ (ಡ್ರೈ ಡೇ) ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಸ್ವರೂಪ ಟಿ. ಕೆ. ಅವರು ಆದೇಶ ಹೊರಡಿಸಿದ್ದಾರೆ.
ವಿಸರ್ಜನೆ ಮೆರವಣಿಗೆಯ ಸಮಯದಲ್ಲಿ ಮದ್ಯಪಾನ ಮಾಡಿ ಗಲಭೆ ಎಬ್ಬಿಸುವ ಸಾಧ್ಯತೆಗಳಿರುವುದರಿಂದ ಈ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ.
ಕರ್ನಾಟಕ ಅಬಕಾರಿ ಕಾಯ್ದೆ 1965ರ ಕಲಂ 21ರ ಅಡಿಯಲ್ಲಿ ನೀಡಿರುವ ಅಧಿಕಾರವನ್ನು ಚಲಾಯಿಸಿ ಈ ಆದೇಶ ಹೊರಡಿಸಲಾಗಿದ್ದು, ನಿಗದಿತ ಅವಧಿಯಲ್ಲಿ ಬಾರ್, ವೈನ್ ಶಾಪ್ ಹಾಗೂ ರೆಸ್ಟೋರೆಂಟ್ಗಳು ಕಡ್ಡಾಯವಾಗಿ ಬಂದ್ ಆಗಿರಲಿವೆ.
ದಿನಾಂಕ ಮತ್ತು ಪ್ರದೇಶವಾರು ನಿಷೇಧದ ವಿವರ ಹೀಗಿದೆ:
ಸೆಪ್ಟೆಂಬರ್ 14 (ಜಿಲ್ಲೆಯಾದ್ಯಂತ): ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 12 ಗಂಟೆಯವರೆಗೆ ಉಡುಪಿ ಜಿಲ್ಲೆಯಾದ್ಯಂತ ಸಂಪೂರ್ಣ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ.
ಸೆಪ್ಟೆಂಬರ್ 16 (ಉಡುಪಿ ನಗರ ಠಾಣಾ ವ್ಯಾಪ್ತಿ): ಮಧ್ಯಾಹ್ನ 2 ಗಂಟೆಯಿಂದ ರಾತ್ರಿ 12 ಗಂಟೆಯವರೆಗೆ ಉಡುಪಿ ನಗರ ಠಾಣಾ ವ್ಯಾಪ್ತಿಯ ಮೂಡ ನಿಡಂಬೂರು, ಶಿವಳ್ಳಿ, ಅಂಬಲಪಾಡಿ ಮತ್ತು ಪುತ್ತೂರು ಗ್ರಾಮಗಳಲ್ಲಿ ಡ್ರೈ ಡೇ ಘೋಷಿಸಲಾಗಿದೆ.
ಸೆಪ್ಟೆಂಬರ್ 18 (ವಿವಿಧ ಠಾಣಾ ವ್ಯಾಪ್ತಿಗಳು): ಮಧ್ಯಾಹ್ನ 2 ಗಂಟೆಯಿಂದ ರಾತ್ರಿ 12 ಗಂಟೆಯವರೆಗೆ ಗಂಗೊಳ್ಳಿ, ಕುಂದಾಪುರ ಹಾಗೂ ಕಾಪು ಠಾಣಾ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ.
ಗಂಗೊಳ್ಳಿ ಠಾಣೆ: ಗಂಗೊಳ್ಳಿ, ಗುಜ್ಜಾಡಿ, ಹೊಸಾಡು ಮತ್ತು ತ್ರಾಸಿ ಗ್ರಾಮಗಳು.
ಕುಂದಾಪುರ ಠಾಣೆ: ಕಸಬಾ, ವಡೇರಹೋಬಳಿ ಮತ್ತು ಕೋಟೇಶ್ವರ ಗ್ರಾಮಗಳು.
ಕುಂದಾಪುರ ಠಾಣೆ: ಕಸಬಾ, ವಡೇರಹೋಬಳಿ ಮತ್ತು ಕೋಟೇಶ್ವರ ಗ್ರಾಮಗಳು.
ಕಾಪು ಠಾಣೆ: ಕಾಪು ಪಡು, ಮಜೂರು, ಮಲ್ಲಾರು ಮತ್ತು ಮುಳೂರು ಗ್ರಾಮಗಳು. ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಪ್ರದೇಶಗಳಲ್ಲಿ ಗಣಪತಿ ವಿಸರ್ಜನೆ ನಡೆಯಲಿರುವುದರಿಂದ ಅಬಕಾರಿ ಸನ್ನದು ಹೊಂದಿರುವ ಎಲ್ಲ ಅಂಗಡಿಗಳು ಈ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಲಾಗಿದೆ.

