ಕುಂದಾಪುರ: ಗುಜ್ಜಾಡಿ ಗ್ರಾ.ಪಂ.ಗೆ PDO ವರ್ಗಾವಣೆ… ಆದರೂ ಹಾಜರಾಗದೇ ಜಿಲ್ಲಾ ಪಂಚಾಯಿತಿಯಲ್ಲೇ ಉಳಿದರೇ??
ಕುಂದಾಪುರ: ಇತ್ತೀಚಿಗಷ್ಟೇ ಮುಂಬಡ್ತಿಯಾಗಿ ಗುಜ್ಜಾಡಿ ಗ್ರಾಮ ಪಂಚಾಯಿತಿಗೆ PDO ಆಗಿ ವರ್ಗಾವಣೆಯಾಗಿರುವ ದಿನಕರ್ ಬೆಂಗ್ರೆ, ಗ್ರಾಮ ಪಂಚಾಯಿತಿಗೆ ಹಾಜರಾಗದೆ ಜಿಲ್ಲಾ ಪಂಚಾಯಿತಿಯಲ್ಲೇ ಉಳಿದುಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಗುಜ್ಜಾಡಿ ಗ್ರಾಮ ಪಂಚಾಯಿತಿಗೆ ಏಕೆ ಹಾಜರಾಗುತ್ತಿಲ್ಲ ಎಂದು ಪ್ರಶ್ನಿಸಿದಾಗ, “ಜಿಲ್ಲಾ ಪಂಚಾಯತ್ ಅಧಿಕಾರಿಗಳು ಜಿಲ್ಲಾ ಪಂಚಾಯಿತಿಯಲ್ಲೇ ಉಳಿದುಕೊಂಡು ಕೆಲಸ ಮಾಡುವಂತೆ ಸೂಚಿಸಿದ್ದಾರೆ” ಎಂದು ದಿನಕರ್ ಬೆಂಗ್ರೆ ತಿಳಿಸಿದ್ದಾರೆ ಎನ್ನಲಾಗಿದೆ.
ಇದರಿಂದ ಇದೀಗ ಹಿರಿಯ ಅಧಿಕಾರಿಗಳ ಆದೇಶವೇನು? ವರ್ಗಾವಣೆಯಾದ ಅಧಿಕಾರಿಯನ್ನು ಗ್ರಾಮ ಪಂಚಾಯಿತಿಗೆ ಹಾಜರುಪಡಿಸದೆ ಜಿಲ್ಲಾ ಪಂಚಾಯಿತಿಯಲ್ಲಿ ಉಳಿಸಿಕೊಂಡಿರುವುದೇಕೆ? ಎಂಬ ಪ್ರಶ್ನೆಗಳು ಗುಜ್ಜಾಡಿ ಗ್ರಾಮಸ್ಥರಲ್ಲಿ ಮೂಡಿವೆ.
“ಹಿರಿಯ–ಕಿರಿಯ ಅಧಿಕಾರಿಗಳ ಒಳಒಪ್ಪಂದದಲ್ಲಿ ಗುಜ್ಜಾಡಿ ಗ್ರಾಮ ಪಂಚಾಯಿತಿಯೇ ಬಲಿಯಾಗುತ್ತಿದೆಯೇ?” ಎಂಬ ಗಂಭೀರ ಅನುಮಾನವನ್ನು ಗ್ರಾಮಸ್ಥರು ವ್ಯಕ್ತಪಡಿಸಿದ್ದಾರೆ.
ಕಳೆದ ಹಲವು ವರ್ಷಗಳಿಂದ ಕಾಯಂ PDO ಅಧಿಕಾರಿಗಳ ಕೊರತೆಯಿಂದ ಗುಜ್ಜಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎನ್ನಲಾಗಿದೆ.
ಹೀಗಾಗಿ, ತಕ್ಷಣ ದಿನಕರ್ ಬೆಂಗ್ರೆ ಅವರನ್ನು ಗುಜ್ಜಾಡಿ ಗ್ರಾಮ ಪಂಚಾಯಿತಿಗೆ ಹಾಜರಾಗುವಂತೆ ಸಂಬಂಧಿಸಿದ ಜಿಲ್ಲಾ ಪಂಚಾಯತ್ ಹಿರಿಯ ಅಧಿಕಾರಿಗಳು ಸ್ಪಷ್ಟ ಆದೇಶ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.ಆದೇಶ ಪಾಲನೆಯಾಗದಿದ್ದರೆ ಮುಂದಿನ ದಿನಗಳಲ್ಲಿ ಗುಜ್ಜಾಡಿ ಗ್ರಾಮ ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನೂ ಗ್ರಾಮಸ್ಥರು ನೀಡಿದ್ದಾರೆ.
ಇದೇ ವೇಳೆ, ಮಾನ್ಯ ಶಾಸಕರು, ಜನಪ್ರತಿನಿಧಿಗಳು ಹಾಗೂ ಸಂಘಟನೆಯ ಮುಖಂಡರು ಗುಜ್ಜಾಡಿ ಗ್ರಾಮಸ್ಥರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಮಧ್ಯಪ್ರವೇಶಿಸಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಗುಜ್ಜಾಡಿಗೆ PDO ಯಾವಾಗ?
ವರ್ಗಾವಣೆ ಆದೇಶದ ಬಳಿಕವೂ ಜಿಲ್ಲಾ ಪಂಚಾಯಿತಿಯಲ್ಲೇ ಏಕೆ?
ಅಧಿಕಾರಿಗಳ ಮೌನಕ್ಕೆ ಕಾರಣವೇನು?

