ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ವೈದ್ಯರು ಗ್ರಾಮೀಣ ಆರೋಗ್ಯ ಸೇವೆಗೆ ಮುಂದಾಗಲು ಕರೆ ನೀಡಿದ ಶಾಸಕರು
ಬೈಂದೂರು : ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಬೈಂದೂರು ಸಮುದಾಯ ಆರೋಗ್ಯ ಕೇಂದ್ರ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ನುರಿತ ವೈದ್ಯಾಧಿಕಾರಿಗಳ ಕೊರತೆಯಿಂದ ಜನ ಸಾಮಾನ್ಯರಿಗೆ ತೊಂದರೆ ಆಗುತ್ತಿದ್ದ ಕಾರಣ ಪ್ರಸ್ತುತ ಗ್ರಾಮೀಣ ಸೇವೆಗೆ ಲಭ್ಯರಿರುವ ಆಸಕ್ತ ಸ್ಥಳೀಯ ಎಂ.ಬಿ.ಬಿಎಸ್ ವೈದ್ಯರನ್ನು ಈ ಹಿಂದೆ ಸಂಪರ್ಕಿಸಲಾಗಿ ಹೆಚ್ಚಿನ ವೈದ್ಯರು ಒಪ್ಪಿಗೆ ಸೂಚಿಸಿದ್ದರು.ಪ್ರಸ್ತುತ ಸ್ಥಳೀಯವಾಗಿ ಆರೋಗ್ಯ ಕ್ಷೇತ್ರದ ಕುರಿತು ಕಾಳಜಿ ಇರುವವರ ಮುಖಾಂತರ ಅವರೆಲ್ಲರನ್ನು ಸಂಪರ್ಕಿಸಿ ಖಾಲಿ ಇರುವ ವೈದ್ಯಾಧಿಕಾರಿ ಹುದ್ದೆಗಳಿಗೆ ವೈದ್ಯರನ್ನು ನೇಮಕಗೊಳಿಸಲಾಗಿದ್ದು ಮತ್ತು ವೈದ್ಯರು ಸ್ಥಳೀಯರೇ ಆಗಿರುವುದರಿಂದ ಜನರ ನಾಡಿ ಮಿಡಿತ ಚೆನ್ನಾಗಿ ಬಲ್ಲವರಾಗಿ ಉತ್ತಮ ಆರೋಗ್ಯ ಸೇವೆ ಒದಗಿಸಲು ಸಾಧ್ಯವಾಗುವುದರಿಂದ ಕ್ಷೇತ್ರದ ಜನರಿಗೆ ಉತ್ತಮ ಆರೋಗ್ಯ ಸೇವೆ ನೀಡಲು ಒತ್ತು ನೀಡಲಾಗಿದೆ. ಇದರ ಪರಿಣಾಮವಾಗಿ ಸಿದ್ಧಾಪುರ ಆರೋಗ್ಯ ಕೇಂದ್ರ ಹಾಗೂ ಬೈಂದೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ವೈದ್ಯರ ಸೇವೆ ಲಭ್ಯವಾಗುತ್ತಿದ್ದು,ಇದಕ್ಕಾಗಿ ಗ್ರಾಮೀಣ ಆರೋಗ್ಯ ಸೇವೆಗೆ ಒಪ್ಪಿರುವ ಎಲ್ಲಾ ವೈದ್ಯರಿಗೂ ಧನ್ಯವಾದವನ್ನು ಶಾಸಕರು ಸಮರ್ಪಿಸಿರುತ್ತಾರೆ. ಹಾಗೂ ವೈದ್ಯರ ಬೇಡಿಕೆ ಇರುವ ಕ್ಷೇತ್ರದ ಇನ್ನುಳಿದ ಆರೋಗ್ಯ ಕೇಂದ್ರಗಳಿಗೂ ಸ್ಥಳೀಯ ನುರಿತ ಎಂಬಿಬಿಎಸ್ ವೈದ್ಯರನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮೂಲಕ ನೇಮಕ ಮಾಡಿ ಗ್ರಾಮೀಣ ಜನರ ಆರೋಗ್ಯಕ್ಕೆ ಒತ್ತು ನೀಡಲಾಗುವುದು ಎಂದು ಬೈಂದೂರು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಗುರುರಾಜ್ ಶೆಟ್ಟಿ ಗಂಟಿಹೊಳೆಯವರು ಹೇಳಿಕೆ ನೀಡಿರುತ್ತಾರೆ.
ಬೈಂದೂರು ತಾಲೂಕು ಆಸ್ಪತ್ರೆ ನಿರ್ಮಾಣ, ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೇಲ್ದರ್ಜೆ ಹಾಗೂ ವೈದ್ಯಕೀಯ ಸಿಬ್ಬಂದಿ ನೇಮಕ ಮತ್ತು ಸಮರ್ಪಕ ಆಂಬುಲೆನ್ಸ್ ಸೇವೆಗೆ ಶಾಸಕರ ಒತ್ತಾಯ :
ಬೈಂದೂರಿನ ಬಹು ಬೇಡಿಕೆಯ ನೂರು ಹಾಸಿಗೆಗಳ ತಾಲೂಕು ಆಸ್ಪತ್ರೆ ನಿರ್ಮಾಣ, ಸಿದ್ಧಾಪುರ,ವಂಡ್ಸೆ, ಕಿರಿಮಂಜೇಶ್ವರ ಹಾಗೂ ಕೊಲ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಮುದಾಯ ಆರೋಗ್ಯ ಕೇಂದ್ರಗಳನ್ನಾಗಿ ಮೇಲ್ದರ್ಜೆಗೇರಿಸುವುದು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಖಾಲಿ ಇರುವ ಲ್ಯಾಬ್ ಟೆಕ್ನಿಷಿಯನ್, ಹಾಗೂ ಇತರೆ ಆರೋಗ್ಯ ಸಿಬ್ಬಂದಿಗಳ ಪೂರ್ಣ ಪ್ರಮಾಣದ ನೇಮಕಾತಿ ಮತ್ತು ಜಿಲ್ಲೆಯಲ್ಲಿ ಸಮರ್ಪಕ ರೀತಿಯಲ್ಲಿ ತುರ್ತು 108 ಆಂಬುಲೆನ್ಸ್ ಸೇವೆ ಒದಗಿಸಲು ಇದೇ ಸಂದರ್ಭದಲ್ಲಿ ಸರಕಾರಕ್ಕೆ ಶಾಸಕರು ಆಗ್ರಹಿಸಿದ್ದಾರೆ.

