ಬೈಂದೂರು : ಗ್ರಾಮ ಪಂಚಾಯತ್ ನೌಕರರಾದ ಕ್ಲರ್ಕ್, ಬಿಲ್ ಕಲೆಕ್ಟರ್, ಡಾಟಾ ಎಂಟ್ರಿ ಆಪರೇಟರ್, ವಾಟರ್ ಮ್ಯಾನ್, ಶುಚಿತ್ವ ನೌಕರರು, ಅಟೆಂಡರ್ ಗಳ ನಿವೃತ್ತಿ ಜೀವನಕ್ಕೆ ಆರ್ಥಿಕ ಭದ್ರತೆ, ನೌಕರರಿಗೆ ಹಾಗೂ ಅವರ ಅವಲಂಬಿತರಿಗೆ ಆರೋಗ್ಯ ಭದ್ರತೆ, ಉತ್ತಮ ವೇತನ ಸೌಲಭ್ಯ ಒದಗಿಸುವಂತೆ ಬೈಂದೂರು ವಿಧಾನ ಸಭಾ ಕ್ಷೇತ್ರದ ಶಾಸಕ ಗುರುರಾಜ್ ಗಂಟಿಹೊಳೆಯವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಶಾಸಕರ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಉತ್ತರಿಸಿದ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವರಾದ ಪ್ರಿಯಾಂಕ್ ಖರ್ಗೆಯವರು ಉತ್ತರಿಸಿ ಪ್ರಸ್ತುತ ಸೇವೆಯಿಂದ ನಿವೃತ್ತಿಯಾಗುವ ಗ್ರಾಮ ಪಂಚಾಯಿತಿ ಸಿಬ್ಬಂದಿಗೆ ಅಥವಾ ಸೇವೆಯಲ್ಲಿ ಮರಣ ಹೊಂದಿದ ಸಿಬ್ಬಂದಿಯ ನ್ಯಾಯ ಬದ್ಧ ಅವಲಂಬಿತರಿಗೆ ನಿವೃತ್ತಿ ಹಾಗೂ ಮರಣೋತ್ತರ ಉಪದಾನ ನೀಡಲಾಗುತ್ತಿದೆ. ಸಿಬ್ಬಂದಿ ವರ್ಗದವರಿಗೆ ಅನಿರೀಕ್ಷಿತ ಸಂದರ್ಭದಲ್ಲಿ ಅಪಘಾತಗಳಾದಲ್ಲಿ ಅವರ ಅವಲಂಬಿತ ಕುಟುಂಬ ಸದಸ್ಯರಿಗೆ ಆರ್ಥಿಕ ಭದ್ರತೆ ಒದಗಿಸುವ ಹಿತ ದೃಷ್ಟಿಯಿಂದ ಪ್ರಧಾನ ಮಂತ್ರಿಯವರ “ಜನ್ ಧನ್” ಯೋಜನೆಯಡಿಯಲ್ಲಿ ಮೂರು ಪ್ರಮುಖ ವಿಮಾ ಸೌಲಭ್ಯ ಒದಗಿಸಲು ಗ್ರಾಮ ಪಂಚಾಯತ್ ಗೆ ಸೂಚನೆ ನೀಡಲಾಗಿದೆ ಎಂದು ಉತ್ತರಿಸಿದರು.
ಮುಂದುವರಿದು ಮಾತನಾಡಿದ ಸಚಿವರು, ಗ್ರಾಮ ಪಂಚಾಯತ್ ನೌಕರರಿಗೆ ತೀವ್ರ ಸ್ವರೂದ ಕಾಯಿಲೆಗಳಾದ ಹೃದ್ರೋಗ ಶಸ್ತ್ರ ಚಿಕಿತ್ಸೆ, ಕ್ಯಾನ್ಸರ್, ಬೊನ್ ಮ್ಯಾರೋ ಟ್ರಾನ್ಸ್ ಪ್ಲಾಂಟ್, ಡಯಾಲಿಸಿಸ್ ಮತ್ತು ಮೂತ್ರ ಪಿಂಡ ಖಾಯಿಲೆಗಳಿಗೆ ತುತ್ತಾದಲ್ಲಿ ವೈದ್ಯಕೀಯ ವೆಚ್ಚ ಗರಿಷ್ಠ ರೂ. 50,000 ಗಳನ್ನು ಒಂದು ಬಾರಿಗೆ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ. ಗ್ರಾಮ ಪಂಚಾಯತ್ ಸಿಬ್ಬಂದಿಗಳಿಗೆ ಸೇವಾ ಹಿರಿತನದ ವೇತನ ನಿಗದಿ ಪಡಿಸಲು ಮತ್ತು ವೇತನ ಹೆಚ್ಚಳ ಮಾಡುವ ಪ್ರಸ್ತಾವನೆ ಸರ್ಕಾರದ ಪರಿಶೀಲನೆಯಲ್ಲಿದೆ ಎಂದು ಮಾಹಿತಿ ನೀಡಿದ್ದಾರೆ.

