ಉಡುಪಿ : ಖಾಸಗಿ ಬಸ್ಗಳು ನಿಯಮಾವಳಿಗಳನ್ನು ಪಾಲನೆ ಮಾಡದಿದ್ದರೆ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಎಚ್ಚರಿಕೆ ನೀಡಿದ್ದಾರೆ.
ಫುಟ್ಬೋರ್ಡ್ಗಳಲ್ಲಿ ನೇತಾಡುವುದು, ನಿರ್ದಿಷ್ಟ ಪ್ರಮಾಣಕ್ಕಿಂತ ಅಧಿಕ ಪ್ರಯಾಣಿಕರನ್ನು ಹಾಕುವ ಬಸ್ಗಳನ್ನು ಮುಟ್ಟುಗೋಲು ಹಾಕಲಾಗುವುದು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್ಚರಿಕೆ ನೀಡಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್ ಹಾಲ್ ನಲ್ಲಿ ನಡೆದ ಜಿಲ್ಲಾ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಪರವಾನಿಗೆ ಇದ್ದೂ ರೂಟ್ ಗಳಲ್ಲಿ ಸಂಚರಿಸದಿರುವ ಖಾಸಗಿ ಬಸ್ಗಳ ವಿರುದ್ಧ ಸಾರ್ವಜನಿಕರಿಂದ ದೂರುಗಳು ಕೇಳಿಬರುವ ಬಗ್ಗೆ ಚರ್ಚೆ ನಡೆಯಿತು.
ಕೆಎಸ್ಸಾರ್ಟಿಸಿ ಅಧಿಕಾರಿಗಳು ಮಾತನಾಡಿ, ಹೊಸ ರೂಟ್ಗಳಿಗೆ ಕೆಎಸ್ಸಾರ್ಟಿಸಿ ಬಸ್ ಹಾಕಿದರೆ, ಖಾಸಗಿ ಬಸ್ ಮಾಲಕರು ಕೋರ್ಟ್ ಗೆ ಹೋಗಿ ತಡೆಯಾಜ್ಞೆ ತರುವ ಕಾರಣ ಸಮಸ್ಯೆ ಎದುರಾಗಿದೆ. ಸರಕಾರಿ ಬಸ್ಗಳನ್ನು ಹಾಕುವಂತೆ ಪ್ರಯಾಣಿಕರಿಂದ ಈಗಾಗಲೇ ಹಲವು ಮನವಿಗಳು ಬಂದಿವೆ. ಆದರೆ ಖಾಸಗಿ ಬಸ್ ಮಾಲಕರು ತಡೆಯಾಜ್ಞೆ ತರುವ ಕಾರಣ ಸಮಸ್ಯೆ ಉಂಟಾಗುತ್ತಿದೆ ಎಂದರು.
ಇದಕ್ಕೆ ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ, ಖಾಸಗಿ ಬಸ್ಗಳು ಸಾರ್ವಜನಿಕರಿಗೆ ಸೇವೆ ನೀಡುವ ನಿಟ್ಟಿನಲ್ಲಿ ಕಾರ್ಯಾಚರಿಸಬೇಕು. ಲಭ್ಯ ಇರುವ ಪರ್ಮಿಟ್ ಪ್ರಕಾರ ಬಸ್ಗಳು ಓಡಾಟ ಮಾಡುತ್ತಿವೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸಬೇಕು. ಇಲ್ಲದಿದ್ದರೆ ಜನರ ಹಿತದೃಷ್ಟಿಯಿಂದ ಕೆಎಸ್ಸಾರ್ಟಿಸಿ ಬಸ್ಗಳನ್ನು ಹಾಕಲಾಗುವುದು. ಯಾವ ರೂಟ್ ಗಳಲ್ಲಿ ಬಸ್ಗಳು ಓಡಾಟ ಮಾಡುತ್ತಿಲ್ಲ ಹಾಗೂ ಎಲ್ಲಿಗೆ ಆವಶ್ಯಕತೆ ಇದೆ ಎಂಬ ಬಗ್ಗೆ ಖಾಸಗಿ ಬಸ್ ಮಾಲಕರು ಹಾಗೂ ಕೆಎಸ್ಸಾರ್ಟಿಸಿ ಅಧಿಕಾರಿಗಳು ವಾರದೊಳಗೆ ನಿರ್ಧರಿಸಬೇಕು. ನ. 10ರಂದು ಈ ಬಗ್ಗೆ ಮತ್ತೊಮ್ಮೆ ಸಭೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ತಿಳಿಸಿದರು.

