ಕೋಟ : ಗೆಳೆಯರ ಬಳಗ ಯುವಕ ಸಂಘ ದಾನಗುಂದು, ಹಂದಟ್ಟು ಕಳೆದ 24 ವರ್ಷಗಳಿಂದ ಆಚರಿಸಿಕೊಂಡು ಬರುತ್ತಿರುವ ಸಾರ್ವಜನಿಕ ಶ್ರೀ ಗಣೇಶ ಉತ್ಸವ ಹಂದಟ್ಟು ಚೌತಿಗೆ ಈ ಬಾರಿ 25ರ ಬೆಳ್ಳಿ ಹಬ್ಬದ ಸಂಭ್ರಮ. ಆ ಪ್ರಯುಕ್ತ ಭಾನುವಾರ ಗೆಳೆಯರ ಬಳಗ ಯುವಕ ಸಂಘ ದಾನಗುಂದು, ಹಂದಟ್ಟು ಸಭಾಭಾವನದಲ್ಲಿ ಬೆಳ್ಳಿಹಬ್ಬದ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ನೆರವೇರಿತು.
ಬೆಳ್ಳಿ ಹಬ್ಬದ ಪ್ರಯುಕ್ತ ಆಗಸ್ಟ್ 27ರಿಂದ 31ರ ತನಕ ವಿವಿಧ ಧಾರ್ಮಿಕ, ಸಾಂಸ್ಕ್ರತಿಕ, ಕ್ರೀಡಾ ಕಾರ್ಯಕ್ರಮಗಳ ಜೊತೆ ಜೊತೆಗೆ ಸಾರ್ವಜನಿಕ ಉಪಯೋಗಕ್ಕೆ ನಿರ್ಮಾಣಗೊಳ್ಳುತ್ತಿರುವ ದಿ. ಹಂದಟ್ಟು ಬಲರಾಮ ಹಂದೆ ಸಭಾಭವನ ಲೋಕಾರ್ಪಣೆ, ಲೋಕಕಲ್ಯಾಣಾರ್ಥ ಸಹಸ್ರ ನಾರಿಕೇಳ ಗಣಯಾಗ ಹಾಗೂ ಮಹಾ ಅನ್ನಸಂತರ್ಪಣೆ ನೆರವೇರಲಿದೆ.
ಈ ಸಂದರ್ಭದಲ್ಲಿ ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ಸತೀಶ್ ಕುಂದರ್ ಬಾರಿಕೆರೆ ಬೆಳ್ಳಿಹಬ್ಬದ ಪೋಸ್ಟರ್ ಬಿಡುಗಡೆಗೊಳಿಸಿದರು. ಹಂದಟ್ಟು ಹಾಲು ಉತ್ಪಾದಕರ ಮಹಿಳಾ ಸಂಘದ ಅಧ್ಯಕ್ಷರಾದ ಜಾನಕಿ ಹಂದೆ, ಹಿರಿಯರಾದ ಆನಂದರಾಮ ಉರಾಳ, ಸೂರ್ಯನಾರಾಯಣ ಉರಾಳ, ನಾರಾಯಣ ಪೂಜಾರಿ, ಶೇಖರ ಪೂಜಾರಿ, ಕೋಟತಟ್ಟು ಗ್ರಾಮ ಪಂಚಾಯತ್ ಸದಸ್ಯರಾದ ವಾಸು ಪೂಜಾರಿ, ಹಂದಟ್ಟು ಮಹಿಳಾ ಬಳಗದ ಅಧ್ಯಕ್ಷೆ ರತ್ನ, ಪಂಚವರ್ಣ ಮಹಿಳಾ ಘಟಕದ ಉಪಾಧ್ಯಕ್ಷೆ ಪುಷ್ಪ ಹಂದಟ್ಟು, ಅಘೋರೇಶ್ವರ ಕಲಾರಂಗದ ಉಮೇಶ್ ನಾಯರಿ, ಹಂದಟ್ಟು ಹಾಲು ಉತ್ಪಾದಕರ ಮಹಿಳಾ ಸಂಘದ ಕಾರ್ಯದರ್ಶಿ ಸುಜಾತ ಬಾಯರಿ, ಗೆಳೆಯರ ಬಳಗ ಯುವಕ ಸಂಘ ಮತ್ತು ಹಂದಟ್ಟು ಮಹಿಳಾ ಬಳಗದ ಸದಸ್ಯರು ಉಪಸ್ಥಿತರಿದ್ದರು. ಗೆಳೆಯರ ಬಳಗ ಯುವಕ ಸಂಘದ ಅಧ್ಯಕ್ಷ ಪ್ರಕಾಶ್ ಹಂದಟ್ಟು ಅಧ್ಯಕ್ಷತೆ ವಹಿಸಿದ್ದರು.

